ಉಡುಪಿ: ಹೊಸ ವರ್ಷದ ಮೊದಲ ದಿನವೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಗ್ರಾಮ ಪಂಚಾಯತ್ ಕಚೇರಿಯೇ ತೆರೆಯದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಸಿಬ್ಬಂದಿ ಇಂದು ಕರ್ತವ್ಯಕ್ಕೆ ಹಾಜರಾಗದ ಕಾರಣ ಮಧ್ಯಾಹ್ನವಾದರೂ ಕಚೇರಿ ಬಾಗಿಲು ತೆರೆದಿರಲಿಲ್ಲ.
ಸಿಬ್ಬಂದಿ ಇಲ್ಲದೇ ವರ್ಷದ ಮೊದಲ ದಿನವೇ ಗ್ರಾಮ ಪಂಚಾಯತ್ ಕಚೇರಿ ಬಾಗಿಲು ಮುಚ್ಚಿದ ಪರಿಣಾಮ ಗ್ರಾಮಸ್ಥರು ಪರದಾಡಿದ್ದು,
ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪಿಡಿಒ ಕಿರುಕುಳಕ್ಕೆ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿದ್ದೇ ಇದಕ್ಕೆ ಕಾರಣವಾಗಿದೆ.
ಮಧ್ಯಾಹ್ನವಾದರೂ ಕಚೇರಿ ಬಾಗಿಲು ತೆರೆಯದ್ದನ್ನು ಗ್ರಾಮಸ್ಥರೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಕೂಡಲೇ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯತ್ ಕಚೇರಿಗೆ ಧಾವಿಸಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಂದು ಬಾಗಿಲು ತೆರೆದರೂ ವರ್ಷದ ಮೊದಲ ದಿನವೇ ಗ್ರಾಮಸ್ಥರು
ಸಿಬ್ಬಂದಿಗಳಿಲ್ಲದೇ ಸೇವೆಯಿಂದ ವಂಚಿತರಾಗಬೇಕಾಯಿತು.