ಮಂಗಳೂರು: ಒಂದೂವರೆ ವರ್ಷದ ಬಳಿಕ ಚಿಣ್ಣರ ಆಗಮನಕ್ಕೆ ಅಂಗನವಾಡಿಗಳೂ ಸಜ್ಜಾಗಿದ್ದು, ನ. 8 ರಿಂದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಂಗನವಾಡಿಗಳನ್ನು ತೆರೆಯುವಂತೆ ಸರಕಾರ ಸೂಚಿಸಿದೆ.
ವಿಶೇಷವೆಂದರೆ ಕೇಂದ್ರಕ್ಕೆ ಬರುವ ಎಲ್ಲರಿಗೂ ಕೈ ತೊಳೆಯಲು ಸೋಪು ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಎಲ್ಲ ಮಕ್ಕಳು ಪ್ರತೀ 30 ನಿಮಿಷಕ್ಕೊಮ್ಮೆ ಕೈ ತೊಳೆಯಬೇಕು.
ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹಾಗೂ ಹಾಜರಾಗುವ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಸಂದರ್ಶಕರಿಗೆ ನಿರ್ಬಂಧವಿರಲಿದೆ.
ಅಂಗನವಾಡಿ ಕೇಂದ್ರಗಳನ್ನು ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ 12ರ ವರೆಗೆ ತೆರೆಯಬಹುದಾಗಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಮೈಕೈ ನೋವು, ಉಸಿರಾಟದ ಸಮಸ್ಯೆ, ರುಚಿ ಹಾಗೂ ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣಗಳಿದ್ದರೆ ಅಂತಹ ಮಗುವನ್ನು ಕರೆತರದಂತೆ ಸೂಚಿಸಬೇಕಿದೆ.
ಮಕ್ಕಳನ್ನು 1 ಮೀಟರ್ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚು ಇದ್ದಲ್ಲಿ 2 ಅಥವಾ 3 ದಿನಕ್ಕೊಮ್ಮೆ ಬರುವಂತೆ ಸೂಚಿಸಬೇಕು. ಒಂದು ವೇಳೆ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಎಲ್ಲ ಮಕ್ಕಳನ್ನು ಪ್ರತೀ ದಿನ ಬರುವಂತೆ ತಿಳಿಸಬೇಕು.
ವಲಸೆ ಬಂದವರ ಮಕ್ಕಳು ಊರಲ್ಲಿದ್ದರೆ ಅಂತಹ ಮಕ್ಕಳನ್ನು ಅಂಗನವಾಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪೌಷ್ಟಿಕ ಆಹಾರದೊಂದಿಗೆ ಎಲ್ಲ ಸೇವೆಗಳನ್ನು ಒದಗಿಸಬೇಕು. ಯಾವುದೇ ದಾಖಲಾತಿ ಇಲ್ಲದಿದ್ದರೂ ನೋಂದಣಿ ನಿರಾಕರಿಸಬಾರದು.
ಸ್ಯಾನಿಟೈಸರ್/ಸೋಂಕು ನಿವಾರಕ ಪುಟಾಣಿಗಳ ಕೈಗೆ ಸಿಗದಂತೆ ಸುರಕ್ಷಿತ ಸ್ಥಳದಲ್ಲಿ ಇಡಬೇಕು ಎಂದು ಸೂಚಿಸಲಾಗಿದೆ.