ಬೆಂಗಳೂರು: ಸ್ವಸಹಾಯ ಸಂಘಗಳ ಉದ್ಯಮಶೀಲ ಮಹಿಳೆಯರಿಗೆ ಮಾರುಕಟ್ಟೆ ಮತ್ತಿತರ ಉತ್ತೇಜನ ನೀಡಲು ಮತ್ತು ಸಾವಯವ ಕೃಷಿ ಸಂಬಂಧ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯು ಎರಡು ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯು ಕ್ರಮವಾಗಿ ಬೆಂಗಳೂರಿನ ಐಐಎಂ ಮತ್ತು ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘಗಳ ಜತೆ ಈ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡಿದೆ.
ಇವುಗಳ ಪೈಕಿ ಐಐಎಂಬಿ ಜತೆಗಿನ ಒಡಂಬಡಿಕೆ 2 ವರ್ಷದ್ದಾಗಿದ್ದು, ಇದರಡಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಕ್ಯುಬೇಟರ್ ಸೌಲಭ್ಯ ಸಿಗಲಿದೆ. ಈ ಮೂಲಕ ಸ್ವಸಹಾಯ ಸಂಘಗಳಲ್ಲಿ ತೊಡಗಿ ಕೊಂಡಿರುವ ಮಹಿಳೆಯರಿಗೆ ಅಗತ್ಯ ಮಾರ್ಗದರ್ಶನ ಸಿಗಲಿದೆ.
ಈ ಪರಿಪೋಷಣಾ ಕೇಂದ್ರದ ಮೂಲಕ ಮಹಿಳೆಯರ ನೇತೃತ್ವದ ಸ್ವಸಹಾಯ ಸಂಘಗಳಿಗೆ ಅಗತ್ಯವಾದ ವಹಿವಾಟು ಮಾದರಿ, ತರಬೇತಿ, ಗುಣಮಟ್ಟ ನಿಯಂತ್ರಣ, ಗೋದಾಮು ಸೌಲಭ್ಯ ಮತ್ತು ಪೂರೈಕೆ ಸರಪಳಿ ಬಗ್ಗೆ ಅರಿವು ಮೂಡಿಸಿ, ನೆರವು ನೀಡುವ ಕೆಲಸ ಆಗಲಿದೆ.
ಕಳೆದ ಎರಡು ವರ್ಷಗಳಲ್ಲಿ ತಲಾ 20, 15 ಮತ್ತು 12 ಲಕ್ಷ ರೂ. ವಹಿವಾಟು ನಡೆಸಿರುವಂತಹ ಸಂಸ್ಥೆಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಕಾರ್ಯಕ್ರಮದಡಿ, ಈ ಉದ್ದಿಮೆಗಳಿಗೆ ಬೇಕಾದ ಬಂಡವಾಳದಲ್ಲಿ ಶೇ.75ರಷ್ಟನ್ನು ಸವಾಲು ಸ್ವೀಕೃತಿ ನಿಧಿಯ ರೂಪದಲ್ಲಿ ಒದಗಿಸಿ, ಸುಗಮ ಸಾಲಕ್ಕೂ ವ್ಯವಸ್ಥೆ ಮಾಡಲಾಗುತ್ತದೆ.
ಸುಭಿಕ್ಷಾ ಸೊಸೈಟಿ ಜತೆ ಮಾಡಿಕೊಂಡಿರುವ ಒಡಂಬಡಿಕೆಯು ಸಾವಯವ ಕೃಷಿ ಮಾಡುತ್ತಿರುವ ಮಹಿಳೆಯರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ನೆರವು ನೀಡಲಿದೆ.
ವಹಿವಾಟಿನಲ್ಲಿ ಬರುವ ಹಣವನ್ನು ನೇರವಾಗಿ ಅವರ ಖಾತೆಗೇ ವರ್ಗಾಯಿಸಲಾಗುವುದರ ಜೊತೆಗೆ ಉತ್ಪನ್ನಗಳ ಮಾರಾಟಕ್ಕೆ ಚಿಲ್ಲರೆ ಮಳಿಗೆಗಳನ್ನು ತೆರೆಯಲು ಸುಭಿಕ್ಷಾ ಸೊಸೈಟಿ ಸಹಾಯ ಮಾಡಲಿದೆ.