ಬಂಟ್ವಾಳ: ಬಂಟ್ವಾಳ ಸರಕಾರಿ ಆಸ್ಪತ್ರೆಯನ್ನು 1.67 ಕೋಟಿ ವೆಚ್ಚದಲ್ಲಿ ನವನಿರ್ಮಾಣ ಮಾಡಿ, ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತೆ ಮಾಡಿದ ಬಂಟ್ವಾಳ ಶಾಸಕರಿಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಭಿನಂದನೆಗಳನ್ನು ಹೇಳಿದರು.
ಬಂಟ್ವಾಳದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಸರಕಾರಿ ಆಸ್ಪತ್ರೆಯ ಐಸಿಯು ಘಟಕವನ್ನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಬಡವರಿಗೆ ಅನುಕೂಲವಾಗುವಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಲಾಗಿದ್ದು, ಇಚ್ಛಾಶಕ್ತಿ ಇದ್ದಾಗ ಸರಕಾರಿ ಆಸ್ಪತ್ರೆಯನ್ನು ಗುಣಮಟ್ಟದ ಆಸ್ಪತ್ರೆಯಾಗಿ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದರು.
ಇನ್ನೂ ಕೇಂದ್ರ ಸರಕಾರವು ಮುಖ್ಯವಾದ ಯೋಜನೆಯನ್ನು ಮಾಡುತ್ತಿದ್ದು, ಈ ಯೋಜನೆಯ ಉದ್ದೇಶ ತಾಲೂಕು ಮಟ್ಟದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿದೆ. ತಾಲೂಕಿನಲ್ಲಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಯ ಶೈಲಿಯಲ್ಲಿ ನಿರ್ಮಿಸಿ, ಆಸ್ಪತ್ರೆಗಳಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಮಾತನಾಡಿ, ಆಸ್ಪತ್ರೆಯ ಅಭಿವೃದ್ದಿಗೆ ಮುಖ್ಯವಾಗಿ ಕಾರಣರಾದವರು ಆರೋಗ್ಯ ಇಲಾಖೆಯ ಸಮಿತಿ ಹಾಗೂ ವೈದ್ಯರು ಅವರಿಗೆ ನನ್ನ ಅಭಿನಂದನೆಗಳು ಎಂದರು. ಪ್ರಸ್ತುತ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರವನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಮಾಡಿದ್ದು, ಕೇಂದ್ರ ಸರಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು .
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ ಸೇರಿದಂತೆ ಪ್ರಮುಖರಾದ ನಂದರಾಮ ರೈ, ವಿಶ್ವನಾಥ ಚೆಂಡ್ತಿಮಾರ್, ಗಣೇಶ್ ರೈ ಮಾಣಿ, ಮಾದವಮಾವೆ, ಸುರೇಶ್ ಕೋಟ್ಯಾನ್, ಸಂದೀಪ್ ಎಸ್.ಆರ್, ಡಿ.ಎಚ್.ಒ ಡಾ!ಕಿಶೋರ್, ತಹಶೀಲ್ದಾರ್ ಸ್ಮಿತಾ ರಾಮು, ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ, ಟಿ.ಎಚ್.ಒ.ಡಾ! ಸುದರ್ಶನ ಉಪಸ್ಥಿತರಿದ್ದರು