ಬೆಳ್ತಂಗಡಿ ಶಾಖೆಯ ಅಧ್ಯಕ್ಷ, ಖಜಾಂಜಿ, ರಾಜ್ಯ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ನ.7 ಅಂತಿಮ ದಿನ ಕೊನೆಗೊಳ್ಳುತ್ತಿದ್ದಂತೆ ಇದೀಗ ಚುನಾವಣೆಯ ಮತದಾರರ ಪಟ್ಟಿಯ ವಿವಾದ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಬೆಳ್ತಂಗಡಿ ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋಗಿರುವ ವಿಷಯ ತೀವ್ರ ಗೊಂದಲಕ್ಕೆ ಕಾರಣವಾಗಿ ವಿವಾದ ಉಂಟಾಗಿತ್ತು. ಆದರೂ 22 ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದೀಗ ಅಧ್ಯಕ್ಷ ಗಾದಿಗೆ ಹಾಗೂ ಇತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಸಲು ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಗೊಳ್ಳುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ವಿಷಯ ಸ್ಫೋಟಗೊಂಡಿದ್ದು, ವಾರ್ಷಿಕ ಚಂದಾ ಪಾವತಿಸಿದರೂ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೆ, ನಿರ್ದೇಶಕರ ಸ್ಥಾನಕ್ಕೆ ನೀಡಿದ ಅರ್ಜಿಯನ್ನು ತಿರಸ್ಕರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪುಂಜಾಲಕಟ್ಟೆ ಪ್ರೌಢ ಶಾಲಾ ಶಿಕ್ಷಕ ಧರಣೇಂದ್ರ ಕೆ.ಜೈನ್ ಹಾಗೂ ನಿಟ್ಟಡೆ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆರತಿ ಕುಮಾರಿ ದೂರು ನೀಡಿದ್ದಾರೆ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಕಾರ್ಯದರ್ಶಿ ಶ್ರೀ ಮತಿ ಗಂಗಾ ರಾಣಿ ಹಾಗೂ ಚುನಾವಣಾ ಅಧಿಕಾರಿ ನಾರಾಯಣ ನಾಯ್ಕ ಅವರ ಮೇಲೆ ಆರೋಪ ಹೊರಿಸಿ ಈ ದೂರನ್ನು ನೀಡಲಾಗಿದೆ.
ಧರಣೇಂದ್ರ ಕೆ. ಜೈನ್ ಹಾಗೂ ಆರತಿ ಕುಮಾರಿ ನೀಡಿದ ದೂರಿನಲ್ಲಿ ಏನಿದೆ :ನಾವು ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು, ಇದರ ಬೆಳ್ತಂಗಡಿ ಶಾಖೆಯಲ್ಲಿ ಸದಸ್ಯರಾಗಿದ್ದು, ಪ್ರತೀ ವರ್ಷ ಚಂದಾ ಹಣವನ್ನು ನಮ್ಮವೇತನದಿಂದ ಕಡಿತಗೊಳಿಸಲಾಗಿರುತ್ತದೆ. ಸದ್ರಿ ವಿಚಾರಗಳನ್ನು ತಿಳಿಸಿದಾಗ್ಯೂ ಅಧ್ಯಕ್ಷ ಜಯರಾಜ್ ಮತ್ತು ಕಾರ್ಯದರ್ಶಿ ಗಂಗಾರಾಣಿ ಅವರು ನಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ನಾವು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು ರವರಿಗೆ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಇ-ಮೇಲ್ ಮಾಡಿದಾಗ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಜಿಲ್ಲಾ ಸಂಘ ಮಂಗಳೂರು ರವರಿಗೆ ಸೂಚಿಸಿರುತ್ತಾರೆ. ಜಿಲ್ಲಾ ಸಂಘದವರು ನಮ್ಮ ಹೆಸರನ್ನು ಸೇರಿಸಿ ನಮಗೆ ಇ-ಮೇಲ್ ಮಾಡಿರುತ್ತಾರೆ. ಸದ್ರಿ ಇ-ಮೇಲ್ ಪ್ರತಿಯನ್ನು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದರೂ 6 ಮತ್ತು 8 ರಲ್ಲಿ ರಾಜ್ಯ ಕಛೇರಿಯ ಅನುಮೋದನೆ ಇರುವುದಿಲ್ಲ ಎಂದು ಹೇಳಿ ನಮ್ಮ ನಿರ್ದೇಶಕರ ಹುದ್ದೆಗೆ ಸಲ್ಲಿಸಿದ ನಮ್ಮ ನಾಮ ಪತ್ರ ತಿರಸ್ಕರಿಸಿರುತ್ತಾರೆ ಎಂದಿದ್ದಾರೆ.


