ಉಡುಪಿ: ಮನೆಯ ಹಾಲ್ ನ ಟಿಪಾಯಿ ಮೇಲೆ ಇಟ್ಟಿದ್ದ ಚಿನ್ನವನ್ನು ಕಿಟಕಿ ಮೂಲಕ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದ್ರಾಳಿ ಮಂಚಿಕೆರೆ ನಿವಾಸಿ ಗುರುರಾಜ್ ನಾಯ್ಕ್ (35) ಎಂದು ಗುರುತಿಸಲಾಗಿದೆ.
ಮಾರ್ಚ್ 26 ರಂದು ಗುಂಡಿಬೈಲು ಪಾಡಿಗಾರ ನಿವಾಸಿ ಸುನೀತಾ ಅವರು ಮನೆಯ ಹಾಲ್ನ ಟಿಪಾಯಿ ಮೇಲೆ ಇಟ್ಟಿದ್ದ ಆರೂವರೆ ಪವನ್ ತೂಕದ ಚಿನ್ನದ ಚೈನ್ ಮತ್ತು ನೀಲಿ ಹರಳಿನ ಲಾಕೆಟ್ ಇರುವ ಮೂರೂವರೆ ಪವನ್ ತೂಕದ ಚಿನ್ನದ ಚೈನ್ ನ್ನು ಮನೆಯ ಕಿಟಕಿಯ ಮೂಲಕ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ಅಂದಾಜು ಮೌಲ್ಯ ರೂ. 3,60,000/- ಆಗಿದೆ.ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪ್ರಸಾದ್ಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಕಳವಾಗಿದ್ದ ಚಿನ್ನದ ಚೈನ್ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕದ್ದ ಸ್ಕೂಟರ್ ನ ಸಮೇತ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.