ಉಡುಪಿ; ಬಸ್ ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ.
ಪಡು ಗ್ರಾಮದ ಕಮ್ಯುನಿಟಿ ಹಾಲ್ ನಿವಾಸಿಯಾಗಿರುವ ಅಮೂಲ್ಯ ಸುಕೇಶ್ ಎಂಬವರು (ಬೆಂಗಳೂರಿನಿಂದ ಅ.5 ರಂದು ಸಂಜೆ 6 ಗಂಟೆಗೆ ಊರಿಗೆ ಬರಲೆಂದು ಮನೆಯಿಂದ ಹೊರಟಿದ್ದು, ಒಂದು ಬ್ಯಾಕ್ ಬ್ಯಾಗ್ ಮತ್ತು ಒಂದು ವ್ಯಾನಿಟಿ ಬ್ಯಾಗ್ ನೊಂದಿಗೆ ಹೊರಟಿದ್ದರು. ಅವರ ಬ್ಯಾಕ್ ಬ್ಯಾಗ್ ನಲ್ಲಿ 1) ಸುಮಾರು 25 ಗ್ರಾಂ ತೂಕದ ಚಿನ್ನದ ಕರಿಮಣಿ ಸರ-1, 2) ಸುಮಾರು 20 ಗ್ರಾಂ ತೂಕದ ಚಿನ್ನದ ಬಳೆಗಳು-2 ನ್ನು ಒಂದು ಚಿಕ್ಕ ಬಟ್ಟೆಯ ಚೀಲದಲ್ಲೂ, 3) ಪೆಂಡೆಂಟ್ ಇರುವ ಸುಮಾರು 15 ಗ್ರಾಂ ತೂಕದ ಚಿನ್ನದ ಸರ-1, 4) ಸುಮಾರು 8 ಗ್ರಾಂ ತೂಕದ, ಬಿಳಿ ಸ್ಟೋನ್ ಇರುವ ಚಿನ್ನದ ಪೆಂಡೆಂಟ್ -1, ಮತ್ತು 5) ಹವಳ ಅಳವಡಿಸಿದ ಸುಮಾರು 6 ಗ್ರಾಂ ತೂಕದ ಚಿನ್ನದ ಪೆಂಡೆಂಟ್ -1 ನ್ನು ಆಭರಣಗಳನ್ನಿಡುವ ಒಂದು ಚಿಕ್ಕ ಡಬ್ಬದಲ್ಲೂ ಇರಿಸಿ ಬ್ಯಾಕ್ ಬ್ಯಾಗ್ ನಲ್ಲಿ ಬಟ್ಟೆಗಳ ಅಡಿಭಾಗದಲ್ಲಿ ಇರಿಸಿಕೊಂಡು ಮನೆಯಿಂದ ಗಂಡನ ಜೊತೆ ಹೊರಟಿದ್ದರು. ಎಂ.ಜಿ. ರಸ್ತೆಯಲ್ಲಿ ಇಬ್ಬರೂ ಒಂದು ಮೀಟಿಂಗ್ ನಲ್ಲಿ ಭಾಗವಹಿಸಿ ಬಳಿಕ ವಸಂತ ನಗರದಲ್ಲಿ ಹೋಟೆಲ್ ನಲ್ಲಿ ಊಟ ಮಾಡಿ ಬಳಿಕ ಗೋವರ್ಧನ ಟಾಕೀಸ್ ಹತ್ತಿರ ದೂರುದಾರರು ರಾತ್ರಿ 11.50 ಗಂಟೆಯ ಸುಮಾರಿಗೆ ಬಸ್ಸು ಹತ್ತಿ ಅವರಿಗಾಗಿ ಕಾಯ್ದಿರಿಸಿದ್ದ ಸೀಟ್ ನಂಬ್ರ 26 ರಲ್ಲಿ ಕುಳಿತಿದ್ದಾರೆ.
ಬಸ್ಸಿನಲ್ಲಿ ಆಭರಣಗಳಿದ್ದ ಬ್ಯಾಕ್ ಬ್ಯಾಗನ್ನು ಅವರ ಕಾಲುಗಳ ಮಧ್ಯೆ ಇಟ್ಟುಕೊಂಡಿದ್ದು, ದಿನಾಂಕ 06.10.2024 ರಂದು ಬೆಳಿಗ್ಗೆ 07.30 ಗಂಟೆಯ ಸಮಯಕ್ಕೆ ಬಸ್ಸು ಮಂಗಳೂರಿನ ಬಸ್ ನಿಲ್ದಾಣ ತಲುಪಿದಾಗ ಬ್ಯಾಗಿನೊಂದಿಗೆ ಶೌಚಾಲಯಕ್ಕೆ ಹೋಗಿ ಬಂದಿದ್ದು, ನಂತರ ಅದೇ ಬಸ್ಸಿನಲ್ಲಿ ಹೊರಟು ಬೆಳಿಗ್ಗೆ 08.30 ಗಂಟೆಯ ವೇಳೆಗೆ ಕಾಪು ಮಂದಾರ ಹೋಟೆಲ್ ಹತ್ತಿರ ಬಸ್ ಇಳಿದಿರುತ್ತಾರೆ. ಅಲ್ಲಿ ಅವರ ಮಾವ ಸಂಜಯ ಎಂಬವರು ಕಾದು ನಿಂತಿದ್ದು, ತನ್ನ ಮಾವನ ಕಾರಿನಲ್ಲಿ ಬೆಳಿಗ್ಗೆ 08.40 ಗಂಟೆಯ ಸಮಯಕ್ಕೆ ಮನೆ ತಲುಪಿದ್ದು, ಮನೆಯ ಒಂದು ರೂಮಿನಲ್ಲಿ ಚಿನ್ನಾಭರಣಗಳಿದ್ದ ಬ್ಯಾಗನ್ನು ಇರಿಸಿರುತ್ತಾರೆ. ನಂತರ ಬೆಳಿಗ್ಗೆ 10.30 ಗಂಟೆಯ ಸಮಯಕ್ಕೆ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ತೆಗೆಯಲು ನೋಡಿದಾಗ ಚಿನ್ನಾಭರಣಗಳಿದ್ದ ಚಿಕ್ಕ ಚೀಲ ಮತ್ತು ಚಿಕ್ಕ ಡಬ್ಬ ಕಾಣದೇ ಇದ್ದು, ದೂರುದಾರರು ಪ್ರಯಾಣಿಸಿದ ಬಸ್ಸಿನಲ್ಲಿ ಯಾರೋ ಕಳ್ಳರು ಅವರ ಬ್ಯಾಕ್ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರಬಹುದಾಗಿ ಅನುಮಾನವಿದ್ದು, ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ 4,81,000 ರೂಪಾಯಿಗಳು ಆಗಿರುತ್ತದೆ ಎಂದು ಅಂದಾಜಿಸಿದ್ದು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.