ಸುಬ್ರಹ್ಮಣ್ಯ: ಕುಕ್ಕೆ ದೇವಸ್ಥಾನಕ್ಕೆ ಯಾತ್ರಾರ್ಥಿಗಳಾಗಿ ತುಮಕೂರಿನಿಂದ ಬಂದಿದ್ದ ಕುಟುಂಬವೊಂದರ ಹದಿನೇಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈಯ್ಯಲ್ಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಇಬ್ಬರು ಆರೋಪಿಗಳ ಜಾಮೀನು ಮನವಿ ಸುಳ್ಯ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಬೆಂಗಳೂರು ಪೊಲೀಸರು ಭೇದಿಸಿ ಕಳ್ಳರಿಂದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು. ಕಳೆದ 20 ದಿನಗಳ ಹಿಂದೆ ಬೆಂಗಳೂರು ಯಶವಂತಪುರ ಪೋಲೀಸರು ಮಹಿಳೆಯೊಬ್ಬಾಕೆಯನ್ನು ಬಂಧಿಸಿ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ಆದೇಶ ನೀಡಿತು.
ಆ ಮಹಿಳೆಯನ್ನು ಸುಳ್ಯ ಪೊಲೀಸರು ಸುಳ್ಯ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಹೋಗಿ ತಮ್ಮ ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದು ವಿಚಾರಣೆ ನಡೆಸಿ ಮರಳಿ ಆಕೆಯನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಆರೋಪಿಗಳ ಜಾಲವನ್ನು ಕಂಡು ಹಿಡಿಯಲು ಹೊರಟ ಪೊಲೀಸರಿಗೆ ಕಳೆದ ಒಂದು ವಾರದ ಮೊದಲು ಈ ಘಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಮಹಿಳೆಯು ಪೊಲೀಸರ ಬಲೆಗೆ ಬಿದ್ದಿದ್ದಳು. ಆಕೆ ಬೆಂಗಳೂರು ಮೂಲದ ದಾಸಪ್ಪನ ಪಾಳ್ಯದ ಹೆಸರುಗಟ್ಟ ನಿವಾಸಿ ರತ್ನಮ್ಮ ಎಂಬಾಕೆ ಆಗಿದ್ದಳು. ಆಕೆಯನ್ನು ಕೂಡ ಬೆಂಗಳೂರು ನ್ಯಾಯಾಲಯದಲ್ಲಿ ಹಾಜರು ಪಡಿಸಿ ಆಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಸೆಪ್ಟೆಂಬರ್ 15ರಂದು ಬೆಂಗಳೂರು ಮೂಲದ ವಕೀಲರು ಆರೋಪಿಗಳಿಬ್ಬರ ಪರವಾಗಿ ಜಾಮೀನು ಅರ್ಜಿಯನ್ನು ಸುಳ್ಯ ನ್ಯಾಯಾಲಯಕ್ಕೆ ನೀಡಿ ಆಕೆಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಕಿರಿಯ ಸಿವಿಲ್ ನ್ಯಾಯಾಧೀಶ ಯಶ್ವಂತ್ ಕುಮಾರ್ ರವರಿಗೆ ಮನವಿ ಮಾಡಿಕೊಂಡರು. ಈ ವೇಳೆ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ದನ ಬಿ ವಾದಿಸಿ ಇಬ್ಬರು ಆರೋಪಿಗಳು ಬಾರಿ ದೊಡ್ಡ ಕಳ್ಳರ ಜಾಲದಲ್ಲಿ ಇರುವಂತೆ ಕಂಡುಬರುತ್ತಿದ್ದು, ಘಟನೆಯಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಇವರಿಗೆ ಜಾಮೀನು ಮಂಜೂರು ಮಾಡದಂತೆ ವಾದಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.