ಉಡುಪಿ: ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ, ಇಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಬೆಳಿಗ್ಗೆ ಉಡುಪಿಯಿಂದ ಮಣಿಪಾಲದಲ್ಲಿ ನಡೆಯಲಿರುವ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುವ ವೇಳೆ, “ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್” ಎಂದು ಜೋರಾಗಿ ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ತಮ್ಮ ತೀವ್ರ ಆಕ್ರೋಶ ಹೊರಹಾಕಿದರು. ಸಚಿವೆ ಹೆಬ್ಬಾಳ್ಕರ್ ಅವರು ಅತ್ಯಂತ ಅಪರೂಪಕ್ಕೆ ಒಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಇದರಿಂದಾಗಿ ಜಿಲ್ಲೆಯ ಜನರ ಸಮಸ್ಯೆಗಳು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿವೆ ಎಂಬುದು ಯುವ ಮೋರ್ಚಾ ಕಾರ್ಯಕರ್ತರ ಪ್ರಮುಖ ಆರೋಪವಾಗಿದೆ.
ಇದಕ್ಕೂ ಮುನ್ನ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿ ಯುವ ಮೋರ್ಚಾ ಯೋಜನೆ ರೂಪಿಸಿತ್ತು. ಈ ಮುನ್ಸೂಚನೆ ಅರಿತ ಪೊಲೀಸರು ಮಣಿಪಾಲದ ರಜತಾದ್ರಿಯ ಮುಂಭಾಗದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ನಿರ್ಧಾರವನ್ನು ಬದಲಿಸಿದ ಪ್ರತಿಭಟನಾಕಾರರು, ಸಚಿವರ ವಾಹನ ಬರುತ್ತಿದ್ದಂತೆ “ಗೋ ಬ್ಯಾಕ್ ಲಕ್ಷ್ಮಿ ಅಕ್ಕ” ಎಂದು ಘೋಷಣೆಗಳನ್ನು ಕೂಗಿದರು. ಈ ತೀವ್ರ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆಯೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಕಾರಿನ ಮೂಲಕ ನೇರವಾಗಿ ಕೆ.ಡಿ.ಪಿ ಸಭೆಗೆ ತೆರಳಿದರು.


