ಕಾರ್ಕಳ: ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುರಕ್ಷಿತ (20) ಎಂಬ ಯುವತಿ ಕೆಲಸ ಮುಗಿಸಿ ಮನೆಗೆ ಬಾರದೆ ನಾಪತ್ತೆಯಾದ ಹಿನ್ನಲೆಯಲ್ಲಿ ಮನನೊಂದ ಯುವತಿಯ ತಂಗಿ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದಲ್ಲಿ ಇಂದು ನಡೆದಿದೆ.
ಮಾಳ ಗ್ರಾಮದ ಮಂಜಲ್ತಾರ್ ನಿವಾಸಿಯಾಗಿರುವ ಸುರಕ್ಷಿತ, ಬುಧವಾರ ಬೆಳಗ್ಗೆ 08:00 ಗಂಟೆಗೆ ಕೆಲಸಕ್ಕೆಂದು ಹೋದವಳು ಸಂಜೆ 6:30 ಗಂಟೆಯವರೆಗೆ ಮನೆಗೆ ವಾಪಾಸ್ಸು ಬಾರದೇ ಇದ್ದಳು. ನಂತರ ಗಾಬರಿಗೊಂಡ ಆಕೆಯ ಸಹೋದರಿ ಫೋನ್ ಮಾಡಿದಾಗ, ನನಗೆ ಮದುವೆ ನಿಶ್ಚಯವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಪ್ರೀತಿಸಿದ ಸಹೋದ್ಯೋಗಿ ಯುವಕನೊಂದಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಳು. ಅಲ್ಲದೆ ಹುಡುಕುವ ಪ್ರಯತ್ನ ಮಾಡದಂತೆ ತಂಗಿಗೆ ತಿಳಿಸಿದ್ದಳು.
ಮಗಳು ನಾಪತ್ತೆಯಾದ ಕುರಿತು ಪೋಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಕ್ಕನ ಮಾತಿನಿಂದ ಆಘಾತಗೊಂಡ ತಂಗಿ ಅನಂತರ ನೊಂದಿದ್ದಳು. ಆಕೆ ತೀವ್ರ ಅಸ್ವಸ್ಥಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ನಾಪತ್ತೆಯಾಗಿರುವ ಯುವತಿಗೆ ಲಾಕ್ ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಆದರೆ ಯುವತಿ ತನ್ನೊಂದಿಗೆ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಭುಮನ ಎಂಬುವನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.



