ಕುಂದಾಪುರ : ಅತ್ಯಂತ ಚಾಕಚಕ್ಯತೆಯಿಂದ ಬಿದಿರು ಸಾಗಾಟದ ಸೋಗಿನಲ್ಲಿ ಬಿದಿರು ಬೊಂಬಿನ ಒಳಗೆ ಗಾಂಜಾ ತೂರಿಸಿ ಸಾಗಾಟ ಮಾಡುತ್ತಿದ್ದ ವಾಹನ ಅಡ್ಡಗಟ್ಟಿದ ಉಡುಪಿ ಡಿಸಿಐಬಿ ಪೊಲೀಸರು 49 ಕೆಜಿ ಗಾಂಜಾವನ್ನು ಬ್ರಹ್ಮಾವರದ ಹೇರೂರು ಬಳಿ ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಮತ್ತು ಆತನ ಸಹಚರ ಬಂಧಿತರು.
ಬಿದಿರಿನ ಒಳಗೆ ಬರೋಬ್ಬರಿ 49 ಕೆಜಿ ಗಾಂಜಾ ಇರಿಸಿ ಕಂಟೇನರ್ ಲಾರಿಯಲ್ಲಿ ಸಾಗಾಟ ಮಾಡಲಾಗುತ್ತಿದ್ದು ಕರಾವಳಿ ಹಾಗೂ ಕೇರಳ ಭಾಗಗಳಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ಉತ್ತರ ಪ್ರದೇಶದಿಂದ ಗಾಂಜಾವನ್ನು ಬಿದಿರಿನೊಳಗೆ ತುಂಬಿಸಿಕೊಂಡು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಉಡುಪಿ ಡಿಸಿಐಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಹೇರೂರಿನಲ್ಲಿ ಕಂಟೇನರ್ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ದೊಡ್ಡ ಪ್ರಮಾಣದ ಬಿದಿರಿನಲ್ಲಿ ಗಾಂಜಾವನ್ನು ಅಡಗಿಸಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ. ಸದ್ಯ ಪ್ರಕರಣವನ್ನು ಉಡುಪಿ ಸೆನ್ ಠಾಣೆಗೆ ವರ್ಗಾಯಿಸಲಾಗಿದ್ದು ಅವರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ, ಎಎಸ್ಐ ರವಿಚಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ದಯಾನಂದ್, ರಾಜ್ಕುಮಾರ್, ಚಂದ್ರ ಶೆಟ್ಟಿ, ಸುರೇಶ್, ರಾಘವೇಂದ್ರ ಮತ್ತು ಶಿವಾನಂದ ಕಾರ್ಯಾಚರಣೆಯಲ್ಲಿದ್ದರು.