ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮಾಹಿತಿಯನ್ನು ಬೇಕಾಬಿಟ್ಟಿಯಾಗಿ ಶೇರ್ ಮಾಡುವ ಯುವತಿಯರೇ ದಯವಿಟ್ಟು ಈ ಸ್ಟೋರಿಯನ್ನು ಎರಡೆರಡು ಬಾರಿ ಓದಿ. ಫೇಸ್ ಬುಕ್ ನಲ್ಲಿ ಮುಖತಃ ಪರಿಚಯವೇ ಇಲ್ಲದವರ ಜೊತೆ ವ್ಯವಹರಿಸುವಾಗ ಅತ್ಯಂತ ಜಾಗರೂಕರಾಗಿ. ಬೆಂಗಳೂರಿನಲ್ಲಿ ವಾಸವಿದ್ದ ಪಶ್ಚಿಮಬಂಗಾಳ ಮೂಲದ ಯುವತಿಯೊಬ್ಬಳು ಉದ್ಯೋಗವಿದ್ದರೆ ತಿಳಿಸಿ ಎಂದು ಫೇಸ್ಬುಕ್ನಲ್ಲಿ ಫೋನ್ ನಂಬರ್ ಹಾಕಿದ್ದ ಯುವತಿಗೆ ಕೆಲಸ ಕೊಡುವುದಾಗಿ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಲ್ವರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕೃತ್ಯ ಎಸಗಿದ ಆರೋಪಿಗಳಾದ ಉತ್ತರಪ್ರದೇಶ ಮೂಲದ ರಾಜ (38), ಬಲರಾಮ್ (28), ಸೆಬಾಸ್ಟಿನ್ (24) ಮತ್ತು ಜಿತೇಂದ್ರ (26) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ನಗರದಲ್ಲಿ ಹಲವು ತಿಂಗಳಿಂದ ಕೆಲಸ ಮಾಡಿಕೊಂಡಿದ್ದಳು. ಆದರೆ ಲಾಕ್ಡೌನ್ ವೇಳೆ ಆಕೆಯ ಕೆಲಸ ಹೋಗಿತ್ತು. ಜೀವನ ನಡೆಸೋದಕ್ಕೆ ಸಂಕಷ್ಟ ಎದುರಾಗಿ, ಕೆಲಸಕ್ಕಾಗಿ ಹುಡುಕಾಟ ನಡೆಸಿ ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ತನ್ನ ಫೇಸ್ಬುಕ್ ಖಾತೆಯಲ್ಲೇ ‘ಕೆಲಸ ಇದ್ದರೆ ತಿಳಿಸುವಂತೆ’ ಬರೆದುಕೊಂಡು, ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದಳು. ಅದನ್ನು ಗಮನಿಸಿದ್ದ ರಾಜ್, ಸೆ.14ರಂದು ಯುವತಿಗೆ ಕರೆ ಮಾಡಿ ಕೆಲಸ ಇದೆ ಭೇಟಿಯಾಗುವಂತೆ ಸೂಚಿಸಿ ವಿಳಾಸ ಕೊಟ್ಟಿದ್ದ.
ಆತನ ಮಾತನ್ನು ನಂಬಿದ್ದ ಯುವತಿ, ಗುಣಿ ಅಗ್ರಹಾರದಲ್ಲಿರುವ ಖಾಸಗಿ ಶಾಲೆಯ ಸಮೀಪ ಹೋಗಿದ್ದಳು. ಅಲ್ಲಿಗೆ ಬಂದಿದ್ದ ರಾಜ್, ಆಕೆಯನ್ನು ಶೆಡ್ಗೆ ಕರೆದೊಯ್ದಿದ್ದ. ಅದೇ ವೇಳೆ ಆತನ ಸ್ನೇಹಿತರಾದ ಬಲರಾಮ್ ಸೆಬಾಸ್ಟಿನ್, ಜಿತೇಂದ್ರ ಅಲ್ಲಿಗೆ ಬಂದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರಿಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಫೇಸ್ಬುಕ್ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಆಕೆಯನ್ನು ಯಲಹಂಕದಲ್ಲಿ ತಂದು ಬಿಟ್ಟು ಹೋಗಿದ್ದರು.