ಮಂಗಳೂರು : ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರು ಮೊನ್ನೆ ಆ್ಯಂಕರ್ ಅನುಶ್ರೀ ಅವರಿಗೆ ನೋಟಿಸ್ ನ್ನು ನೀಡಿದ್ದರು. ಆದರೆ ಅನುಶ್ರೀ ನಿನ್ನೆ ವಿಚಾರಣೆಗೆ ಗೈರಾಗಿದ್ದರು. ಇಂದು ಬೆಳಗ್ಗೆ ಅನುಶ್ರೀ ಪಣಂಬೂರು ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ.
ನಿನ್ನೆ ಬೆಳಗ್ಗೆಯೇ ವಿಚಾರಣೆಗೆ ಹಾಜರಾಗುವುದಾಗಿ ಅನುಶ್ರೀ ತಿಳಿಸಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನುಶ್ರೀ ಅವರ ನಡೆಯಿಂದ ಪೊಲೀಸರು ಅಸಮಾಧಾನಗೊಂಡಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದರು. ಅದರಂತೆ ಅನುಶ್ರೀ ಅವಧಿಗೂ ಮುನ್ನವೇ ವಿಚಾರಣೆಗೆ ಆಗಮಿಸಿದ್ದಾರೆ. ಇನ್ನು ನಿನ್ನೆ ಅನುಶ್ರೀ ಅವರಿಗಾಗಿ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತಂಡ ಪಾಂಡೇಶ್ವರ ಠಾಣೆಯಲ್ಲಿ ಕಾದು ಕುಳಿತಿತ್ತು. ಆದರೆ ಅನುಶ್ರೀ ಸಂಜೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ. ಆ ವೇಳೆಗೆ ವಿಚಾರಣಾ ತಂಡ ಅಲ್ಲಿಂದ ನಿರ್ಗಮಿಸಿತ್ತು.
ವಿಚಾರಣೆಗೆ ಹಾಜರಾಗುವ ಮುನ್ನ ಅನುಶ್ರೀ ಕಾನೂನು ಸಲಹೆ ಪಡೆಯಲು ವಕೀಲರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ನಿನ್ನೆ ಅನುಶ್ರೀ ವಿಚಾರಣೆಗೆ ಹಾಜರಾಗದ ಕಾರಣ ಇತರೆ ಆರೋಪಿಗಳಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಅವರನ್ನು ಪೊಲೀಸರು ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿತು. ಇಬ್ಬರನ್ನೂ ಅ. 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.