ಮಂಗಳೂರು: ವರುಣನ ಆರ್ಭಟವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಸು ಕಡಿಮೆಯಾಗಿದ್ದು, ಮಂಗಳವಾರದಂದು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ.
ಬೆಳಗ್ಗೆಯಿಂದ ಸಂಜೆಯವರಗೆ ಮಂಗಳೂರು ನಗರದಲ್ಲಿ ಮಳೆ ಬಿಡುವು ನೀಡಿತ್ತು. ಬಿಸಿಲು ಮತ್ತು ಮೋಡದ ವಾತಾವರಣ ಇತ್ತು. ಸಂಜೆ ವೇಳೆ ಬಿರುಸು ಮಳೆಯಾಗಿದ್ದು, ಬಳಿಕ ಮಳೆಯ ತೀವ್ರತೆ ಕಡಿಮೆಯಾಗಿತ್ತು. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆ ಉತ್ತಮ ಮಳೆ ಯಾಗಿದೆ. ಹಗಲಿನ ವೇಳೆ ಕೆಲವೆಡೆ ಬಿಸಿಲಿನ ವಾತಾವರಣವಿತ್ತು. ಸೋಮವಾರ ನೆರೆ ಕಾಣಿಸಿದ್ದ ಪ್ರದೇಶದಲ್ಲಿ ನೀರು ಇಳಿಕೆಯಾಗಿದೆ.
ಕೊಡಗು ಮತ್ತು ಕಾಸರಗೋಡು ಜಿಲ್ಲೆಯಲ್ಲಿಯೂ ಮಳೆ ಪ್ರಮಾಣ ಸೋಮವಾರಕ್ಕಿಂತ ಕಡಿಮೆ ಯಾಗಿತ್ತು.
ಜು.10 ರಿಂದ 13ರವರೆಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಮಂಗಳವಾರ 29.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.5 ಡಿ.ಸೆ. ಏರಿಕೆ ಕಂಡಿತ್ತು. 22.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ. ಕಡಿಮೆ ಇತ್ತು.


