ಬೆಳ್ತಂಗಡಿ : ನಾಲ್ಕು ವರ್ಷದ ಹಿಂದಿನ ದರೋಡೆ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿ ಇಬ್ಬರು ಸಹೋದರರು ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಉಜಿರೆಯ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ರೂ 8,42,240 ರೂಪಾಯಿ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡಿದ್ದು ಮೂರು ಮಂದಿ ದರೋಡೆಕೋರರನ್ನು ನಾಲ್ಕು ವರ್ಷದ ಸತತ ಹುಡುಕಾಟದ ನಂತರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
![](https://mahaxpress.com/wp-content/uploads/2024/05/WhatsApp-Image-2024-05-27-at-16.12.23_eface4c6-1024x789.jpg)
ಪ್ರಕರಣದ ಹಿನ್ನಲೆ: ದಿನಾಂಕ 26-06-2020 ರಂದು ಬೆಳಿಗ್ಗೆ 8.15 ಗಂಟೆಗೆ ದೂರುದಾರರಾದ ಅಚ್ಯುತ್ ಭಟ್ (56) ತಂದೆ:ದಿ/ ವಾಸುದೇವ ಭಟ್ ವಾಸ: ಮಿಯಾ ಮನೆ ಕಲ್ಮಂಜ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ಎಂಬವರು ಧರ್ಮಸ್ಥಳ ಪೊಲಸ್ ಠಾಣೆಗೆ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ “ ನಾನು ಈ ಮೇಲಿನ ವಿಳಾಸದಲ್ಲಿ ವಾಸವಾಗಿದ್ದು, ಅಡಿಕೆ ವ್ಯಾಪಾರ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು.26-06-2020 ರ ರಂದು ಬೆಳಗ್ಗಿನ ಜಾವ 02.50 ಗಂಟೆಗೆ ನಾನು ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ನನ್ನನ್ನು ಸುತ್ತುವರಿದು ನನ್ನನ್ನು ಹಿಡಿದುಕೊಂಡು ಕುತ್ತಿಗೆಯನ್ನು ಅದುಮಿದರು. ಅದೇ ಸಮಯ ನಾನು ಬೊಬ್ಬೆ ಹಾಕಿದಾಗ ನನ್ನ ತಮ್ಮನ ಹೆಂಡ್ತಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಇಬ್ಬರು ಒಳ ನುಗ್ಗಿದರು. ಆ ಸಮಯ ಮನೆಯಲ್ಲಿದ್ದ ನನ್ನ ತಾಯಿ ಕೂಡಾ ಎಚ್ಚರಗೊಂಡಾಗ ಎಲ್ಲರೂ ಸೇರಿ ನನ್ನನ್ನು ನನ್ನ ತಾಯಿ ಮತ್ತು ತಮ್ಮನ ಹೆಂಡ್ತಿಯನ್ನು ಎಳೆದುಕೊಂಡು ಬಂದು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ದೂಡಿ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ ನನಗೆ ಕೈಯಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಗದರಿಸಿ ನಗದು ರೂ 25,000 ರೂಪಾಯಿಯನ್ನು ತೆಗೆದುಕೊಂಡರು ಅಲ್ಲದೇ ಆರೋಪಿಗಳು 30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು ಒಟ್ಟು ಸುಮಾರು ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000/- ರೂ ಅಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.
![](https://mahaxpress.com/wp-content/uploads/2024/05/WhatsApp-Image-2024-05-27-at-16.12.19_448dc0eb-1024x693.jpg)
ಸಿ ರಿಪೋರ್ಟ್ ಹಾಕಲಾಗಿದ್ದ ಪ್ರಕರಣ: ಇದೊಂದು ಘೋರಾಅಪರಾಧ ಪ್ರಕರಣವಾಗಿದ್ದರಿಂದ ಮುಂದಿನ ತನಿಖೆಯನ್ನು ಬೆಳ್ತಂಗಡಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ ಜಿ ರವರು ವಹಿಸಿಕೊಂಡು ತನಿಖೆ ಮುಂದುವರಿಸಿದ್ದು ಬಳಿಕ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರುಗಳು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದರು ಆರೋಪಿತರುಗಳ ಮತ್ತು ಸೊತ್ತಿನ ಪತ್ತೆ ಆಗದೇ ಇದ್ದುದರಿಂದ ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು ಮಾನ್ಯ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ “ ಸಿ “ ರಿಪೋರ್ಟ್ ವರದಿ ಸಲ್ಲಿಸಿರುತ್ತಾರೆ.
ಆರೋಪಿಗಳ ಬಗ್ಗೆ ಗುಪ್ತ ಮಾಹಿತಿ ಮೇ.22 ರಂದು ಸಮಯ ಸುಮಾರು 3 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲ್ ಕುಮಾರ್ ರವರಿಗೆ ಪೊಲೀಸ್ ಮಾಹಿತಿದಾರರಿಂದ ಕಲ್ಮಂಜ ದರೋಡೆ ಪ್ರಕರಣದಲ್ಲಿ ಸಂಶಾಸ್ಪದ ವ್ಯಕ್ತಿಯು ಈ ಪ್ರಕರಣದಲ್ಲಿ ದರೋಡೆ ಮಾಡಿ ದೋಚಿಕೊಂಡ ಚಿನ್ನ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಮನೆಯ ಯು.ಎಸ್.ಇಸ್ಮಾಯಿಲ್ ಅವರ ಮಗ ರಿಯಾಜ್(40) ಎಂಬಾತನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಆರೋಪಿಯೆಂದು ತಪ್ಪು ಒಪ್ಪಿಕೊಂಡಿರುತ್ತಾನೆ.
![](https://mahaxpress.com/wp-content/uploads/2024/05/WhatsApp-Image-2024-05-27-at-17.22.36_7161aca1-1024x662.jpg)
ಮೂವರು ದರೋಡೆಕೋರರ ಬಂಧನ: ಈ ಪ್ರಕರಣದಲ್ಲಿ ಮೊದಲು ವಶಕ್ಕೆ ಪಡೆದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಮನೆಯ ಯು.ಎಸ್.ಇಸ್ಮಾಯಿಲ್ ಎಂಬವರ ಮಗ 1) ರಿಯಾಜ್(40) ಎಂಬಾತನ ಮಾಹಿತಿ ಮೇರೆಗೆ ಮತ್ತಿಬ್ಬರು ಆರೋಪಿಗಳಾದ 2) ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಯು.ಎಸ್. ಇಸ್ಮಾಯಿಲ್ ಅವರ ಮಗನಾದ ನವಾಝ್(38) ಮತ್ತು 3) ಕಲ್ಬುರ್ಗಿ ಜಿಲ್ಲೆಯ ದಿ.ಬಸಪ್ಪ ಮಗನಾದ ಕೃಷ್ಣ (37) ಧರ್ಮಸ್ಥಳದಲ್ಲಿ ಇರುವುದಾಗಿ ಆರೋಪಿ ರಿಯಾಜ್ ತಿಳಿಸಿದಂತೆ ಅವರನ್ನು ಕೂಡ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವರ ಜೊತೆ ಮತ್ತಿಬ್ಬರು ಹೊರರಾಜ್ಯದ ಎರಡು ಜನ ಸ್ನೇಹಿತರು ಕೂಡ ಬಾಗಿಯಾಗಿರುವ ಬಗ್ಗೆ ತಿಳಿಸಿರುತ್ತಾರೆ.ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಾದ ರಿಯಾಜ್ ಮತ್ತು ನವಾಝ್ ಸಹೋದರರಾಗಿದ್ದಾರೆ.
![](https://mahaxpress.com/wp-content/uploads/2024/05/WhatsApp-Image-2024-05-27-at-17.20.56_a346b240-1024x517.jpg)
ವಶಪಡಿಸಿಕೊಂಡ ವಸ್ತುಗಳು: ಈ ಪ್ರಕರಣದಲ್ಲಿ ಆರೋಪಿಗಳಿಂದ ಒಟ್ಟು 104 ಗ್ರಾಂ ಬಂಗಾರದ ಆಭರಣಗಳ ಅದರ ಅಂದಾಜು ಮೌಲ್ಯ ಸುಮಾರು 7,87,000 ರೂಪಾಯಿ ,288 ಗ್ರಾಂ ಬೆಳ್ಳಿ ಅದರ ಅಂದಾಜು ಮೌಲ್ಯ ಸುಮಾರು 30,240 ರೂಪಾಯಿ ಆಗಬಹುದು , ಟಿವಿಎಸ್ ಕಂಪೆನಿಯ ಅಪಾಚಿ ಮೋಟರ್ ಬೈಕ್ -1 ಅದರ ಅಂದಾಜು ಮೌಲ್ಯ ಸುಮಾರು 25,000/- ಆಗಬಹುದು ಒಟ್ಟು ಮೌಲ್ಯ 8,42,240/- ರೂಪಾಯಿ ಆಗಬಹುದು ಹಾಗೂ ವಶಪಡಿಸಿಕೊಂಡು ಆರೋಪಿತರನ್ನು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.24 ರಂದು ಹಾಜರುಪಡಿಸಿ ಮೂರು ದಿನ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದು.ಮೇ.27 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
![](https://mahaxpress.com/wp-content/uploads/2024/05/WhatsApp-Image-2024-05-27-at-16.14.32_07859deb-1024x575.jpg)
ಪತ್ತೆ ಕಾರ್ಯಾಚರಣೆ: ಈ ಪ್ರಕರಣದಲ್ಲಿ ದ.ಕ. ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಶ್ಯಂತ್ , ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ವಸಂತ್ ಆರ್ ಆಚಾರ್, ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ನಾಗರಾಜ್ ಹೆಚ್.ಇ,ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಸುಬ್ಬಾಪುರ ಮಠ ಮಾರ್ಗದರ್ಶದಂತೆ ಧರ್ಮಸ್ಥಳ ಪೋಲಿಸ್ ಠಾಣಾ ಪೋಲಿಸ್ ಉಪ-ನಿರೀಕ್ಷಕರುಗಳಾದ ಅನೀಲ್ ಕುಮಾರ್ ಡಿ, ಸಮರ್ಥ ಆರ್ ಗಾಣಿಗೇರ ಹಾಗೂ ಸಿಂಬಂಧಿಗಳಾದ ರಾಜೇಶ್ ಎನ್, ಪ್ರಶಾಂತ್ ಎಂ ,ಸತೀಶ್ ನಾಯ್ಕ್ ,ಪ್ರಮೋದಿನಿ , ಶೇಖರ್ ಗೌಡ , ಕೃಷ್ಣಪ್ಪ, ಆನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ, ಗೋವಿಂದರಾಜ್, ಭಿಮೇಶ್,ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ಪತ್ತೆ ಕಾರ್ಯಾಚರಣೆಗೆ ಸಹಕರಿಸಿರುತ್ತಾರೆ.ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರನ್ನು ಶ್ಲಾಘಿಸಿದ್ದು, ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಎಸ್ಪಿ ಹೇಳಿದ್ದಾರೆ.