ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನೆಗೆ ಪೊಲೀಸರ ಭೇಟಿ ಮತ್ತು ಶಾಸಕರ ವಿಚಾರಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಸ್ಪಷ್ಟೀಕರಣ ನೀಡಿದ್ದಾರೆ.
ಶಾಸಕರನ್ನು ಮನೆಯಿಂದ ಠಾಣೆಗೆ ಪೊಲೀಸರೇ ಕರೆದುಕೊಂಡು ಬಂದಿದ್ದು ಸ್ಟೇಷನ್ ಬೇಲ್ ಕೊಡಲಾಗಿದೆ ಎಂದು ಹೇಳಿರುವ ಎಸ್ಪಿ ರಿಷ್ಯಂತ್, ಶಾಸಕರ ಮನೆಗೆ ಅವರನ್ನು ವಿಚಾರಣೆಗೆ ಬರಲು ನೋಟೀಸ್ ನೀಡಲು ಮೊದಲು ಮೂರೇ ಜನ ಪೊಲೀಸರನ್ನು ಕಳುಹಿಸಿದ್ದು, ಅಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದನ್ನು ನೋಡಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಯಿತು ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳ ಮನವಿಯ ಹಿನ್ನಲೆಯಲ್ಲಿ ಪೊಲೀಸರು ವಾಪಾಸ್ ಬಂದಿದ್ದೇ ಹೊರತು ಪೊಲೀಸರು ಅಲ್ಲಿಂದ ಓಡಿ ಹೋಗಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಿರುವ ಎಸ್ಪಿ,ನಂತರ ಪೊಲೀಸರೇ ಶಾಸಕರನ್ನು ಮನೆಯಿಂದ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರ ವಿರುದ್ಧದ ಒಂದು ಕೇಸ್ ಗೆ ಸ್ಟೇಷನ್ ಬೇಲ್ ನೀಡಲಾಗಿದ್ದು, ಧರಣಿ ವೇಳೆ ಪೊಲೀಸ್ ಠಾಣೆಯಲ್ಲಿ ಶಾಸಕರ ಜೊತೆಗಿದ್ದವರೆಲ್ಲರೂ ಆರೋಪಿಗಳಾಗುತ್ತಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ