ಕಾಸರಗೋಡು: ಚಿರತೆಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಡಿ.25 ರಂದು ರಾತ್ರಿ ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿನ ಮನೆಯೊಂದರ ಪರಿಸರದಲ್ಲಿ ಐದು ಚಿರತೆಗಳು ಗುಂಪಾಗಿ ಏಕಕಾಲದಲ್ಲಿ ಕಂಡು ಬಂದಿದೆ ಎನ್ನಲಾಗಿದೆ.
ಮುಳಿಯಾರು ಪಯೋಲಾದ ಕಲೆಯಪ್ಪಾಡಿ ಕೃಷ್ಣನ್ ಅವರ ಮನೆ ಪರಿಸರದಲ್ಲಿ ಚಿರತೆಗಳು ಗುಂಪಾಗಿ ಕಾಣಿಸಿಕೊಂಡಿದ್ದು, ಮನೆಯವರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ಕಲೆಯಪ್ಪಾಡಿ ಕೃಷ್ಣನ್ ಅವರ ಮನೆಯವರು ಪಕ್ಕದ ದೈವ ಕೋಲ ಉತ್ಸವಕ್ಕೆ ರಾತ್ರಿ ವೇಳೆ ತೆರಳಿದ್ದು, ಕೋಲ ಮುಗಿಸಿ ರಾತ್ರಿ ಮನೆಗೆ ವಾಪಸಾಗುತ್ತಿದ್ದಾಗ ಮನೆ ಪರಿಸರದಲ್ಲಿ ಚಿರತೆಗಳ ಗುಂಪು ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಕೆಲವೇ ಹೊತ್ತಿನಲ್ಲಿ ಈ ಚಿರತೆಗಳು ಅಲ್ಲಿಂದ ತೆರಳಿದೆ ಎನ್ನಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿದ್ದು, ಚಿರತೆಗಳನ್ನ ಹಿಡಿಯಲು ವ್ಯಾಪಕ ಶೋಧ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ವಿವಿಧೆಡೆ ಬೋನುಗಳನ್ನು ಇರಿಸಿದರೂ ಈ ವರೆಗೂ ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಹಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ಕ್ಯಾಮರಾ ಕಣ್ಣಿಗೆ ಚಿರತೆ ಕಂಡು ಬಂದಿಲ್ಲ ಎನ್ನಲಾಗುತ್ತಿದೆ. ಜನರು ಈ ಘಟನೆಯಿಂದ ಭೀತಿಗೀಡಾಗಿದ್ದು, ಚಿರತೆ ಹಿಡಿಯುವಂತೆ ಅರಣ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ.