ಉಪ್ಪಿನಂಗಡಿ: ಬಸ್ ನಿಲ್ದಾಣದ ಬಳಿಯ ಸಮತಾ ಸ್ವೀಟ್ಸ್ ಮಳಿಗೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಗುರುವಾರ ತಡರಾತ್ರಿ ಸಮತಾ ಸ್ವೀಟ್ಸ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಮಳಿಗೆಯನ್ನು ಬಂದ್ ಮಾಡಿ ಮಾಲೀಕರು ಮನೆಗೆ ತೆರಳಿದ್ದು, ತಡರಾತ್ರಿ ಮಳಿಗೆಯೊಳಗಿನಿಂದ ಹೊಗೆ ಬರುತ್ತಿರವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಮಳಿಗೆಯ ಷಟರ್ ತೆರೆಯುತ್ತಲೇ ಮಳಿಗೆಯೊಳಗೆ ಸಂಪೂರ್ಣ ಬೆಂಕಿ ಆವರಿಸಿತ್ತು. ಎಣ್ಣೆಯಂಶವುಳ್ಳ ಸಿಹಿತಿಂಡಿಗಳು ಹೆಚ್ಚು ಬೆಂಕಿ ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ.
ಸಾರ್ವಜನಿಕರು ಬೆಂಕಿ ನಂದಿಸಲು ನೆರವಾದರಾದರೂ ಬೆಂಕಿ ಹತೋಟಿಗೆ ಬಂದಿರಲಿಲ್ಲ. ನಂತರ ಬೆಳ್ತಂಗಡಿ ಹಾಗೂ ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು. ಮಳಿಗೆಯಲ್ಲಿದ್ದ ಫ್ರಿಡ್ಜ್, ಕಪಾಟುಗಳು, ಸಿಹಿತಿಂಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿವೆ. ಅನಾಹುತ ನಿಖರ ಕಾರಣ ತಿಳಿದು ಬಂದಿಲ್ಲ.


