ಚಿಕ್ಕಮಗಳೂರು; ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಚ್ಚಗಿಲಿಗಿಲಿಯ ಚಂದ್ರಪ್ರಭ ವಿರುದ್ಧ ಎಫ್ಐಆರ್ ದಾಖಲಾಗಿದೆ.ಚಿಕ್ಕಮಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದು ನಿಲ್ಲಿಸದೇ ಪರಾರಿಯಾಗಿದ್ದರು ಎಂಬ ಆರೋಪ ಚಂದ್ರಪ್ರಭ ಅವರ ವಿರುದ್ಧ ಕೇಳಿ ಬಂದಿತ್ತು. ಘಟನೆಯಲ್ಲಿ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿ ಮಾಲತೇಶ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದರಂತೆ ಚಂದ್ರಪ್ರಭ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇನ್ನು ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಚಂದ್ರಪ್ರಭ, ‘ನಾನೇ ಕಾರು ಚಾಲನೆ ಮಾಡುತ್ತಿದ್ದೆ. ಕಾರಿನ ಎಡಭಾಗಕ್ಕೆ ಬೈಕ್ ತಗುಲಿತು. ಇಳಿದು ನೋಡಿದಾಗ ಸವಾರ ಬಿದ್ದಿದ್ದರು. ಅವರನ್ನು ಸ್ನೇಹಿತನ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿದೆವು. ಪೊಲೀಸರು ಮತ್ತು ನಾವು ಎತ್ತಿಕೊಂಡಾಗ ಅವರು ಪಾನಮತ್ತರಾಗಿರುವುದು ಗೊತ್ತಾಯಿತು. ಸ್ಥಳದಲ್ಲಿ ಇದ್ದವರು ನಿಮ್ಮ ತಪ್ಪಿಲ್ಲ ಎಂದು ಹೋಗಿ ಎಂದು ಹೇಳಿದರು. ಚಿತ್ರೀಕರಣಕ್ಕೆ ಹೋಗಲೇಬೇಕಿದ್ದ ಕಾರಣ ಹೊರಟೆ’ ಎಂದು ಹೇಳಿದ್ದಾರೆ. ‘ಪೊಲೀಸರು ಕರೆ ಮಾಡಿ ಠಾಣೆಗೆ ಬರಲು ತಿಳಿಸಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಹೇಳಿದಂತೆ ಕೇಳುತ್ತೇನೆ. ಕಾರು ನಿಲ್ಲಿಸದೆ ಪರಾರಿಯಾಗಿರುವುದಾಗಿ ಸುಳ್ಳು ಹರಡಬಾರದು’ ಎಂದು ಮನವಿ ಮಾಡಿದ್ದಾರೆ.