ಉಡುಪಿ: ಇಲ್ಲಿನ ಅಜ್ಜರಕಾಡು ಸರಕಾರಿ ಜಿಮ್ನಲ್ಲಿ ಯುವಕರಿಬ್ಬರು ಹೊಡೆದಾಡಿಕೊಂಡಿದ್ದು, ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಪ್ರದೀಪ್ ಸ್ಯಾಮುವೆಲ್ ಹಾಗೂ ಲಕ್ಷೀತ್ ಹೊಡೆದಾಡಿಕೊಂಡಿವರು.
ಡಿ.31ರಂದು ಉದ್ಯಾವರದ ಪ್ರದೀಪ್ ಸ್ಯಾಮುವೆಲ್ ಅವರು ಎಂದಿನಂತೆ ಬೆಳಗ್ಗೆ ಜಿಮ್ಗೆ ತೆರಳಿದ್ದು, ವಾಪಸ್ ಬರುವಾಗ ಅದೇ ಜಿಮ್ನ ಸದಸ್ಯ ಲಕ್ಷೀತ್ ಎಂಬಾತ ‘ನಿಮ್ಮನ್ನು ಜಿಮ್ ಟ್ರೈನರ್ ಉಮೇಶ್ ಕರೆಯುತ್ತಿದ್ದಾರೆ’ ಎಂದು ಹೇಳಿದ್ದ ಎನ್ನಲಾಗಿದೆ. ಅದರಂತೆಯೇ ಪ್ರದೀಪ್ ಅವರು ಉಮೇಶ್ ಬಳಿಗೆ ಹೋಗಿ ಈ ಕುರಿತಂತೆ ವಿಚಾರಿಸಿದಾಗ ಅವರು‘ನಾನು ನಿಮ್ಮನ್ನು ಕರೆದಿಲ್ಲ’ ಎಂದರು. ಅನಂತರ ಪುನಃ ಲಕ್ಷೀತ್ನಲ್ಲಿ ಈ ಬಗ್ಗೆ ಕೇಳಲು ಹೋದಾಗ, ಆತ ಏಕಾಏಕಿ ಜಿಮ್ ಸಲಕರಣೆಯಿಂದ ಪ್ರದೀಪ್ ತಲೆಗೆ ಹೊಡೆದಿದ್ದಾನೆ ಎಂದು ಒಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನು ಈ ಬಗ್ಗೆ ಲಕ್ಷೀಶ್ ಪ್ರತಿದೂರು ನೀಡಿದ್ದು ತಾನು ಡಿ.31ರಂದು ಅಜ್ಜರಕಾಡು ಜಿಮ್ನ ಕೊಠಡಿಯ ಒಳಗೆ ಹೋದಾಗ ಪ್ರದೀಪ್ ಸ್ಯಾಮುವೆಲ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ಅನಂತರ ಜಿಮ್ನಲ್ಲಿದ್ದ ರಾಡ್ನಿಂದ ಹಲ್ಲೆಗೆ ಮುಂದಾದ. ಪೆಟ್ಟನ್ನು ತಡೆಯುವ ಪ್ರಯತ್ನದಲ್ಲಿ ಬಲಕೈಗೆ ಏಟಾಗಿದೆ. ಈ ವೇಳೆ ಪ್ರದೀಪ್ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಲಾಗಿದೆ.