ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲಕರಿಬ್ಬರ ನಡುವೆ ಗಲಾಟೆ ನಡೆದು ಚಾಲಕನೋರ್ವನಿಗೆ ಮತ್ತೊಬ್ಬ ಚಾಲಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಟೈಮಿಂಗ್ ವಿಚಾರಕ್ಕೆ ಇಬ್ಬರು ಚಾಲಕರ ನಡುವೆ ಉಡುಪಿ ಸಿಟಿಬಸ್ ನಿಲ್ದಾಣದಲ್ಲಿ ಗಲಾಟೆ ನಡೆದಿದೆ. ಖಾಸಗಿ ಬಸ್ಸಿನ ಚಾಲಕರಾಗಿರುವ ಸುನೀಲ್ ಹಲ್ಲೆಗೊಳಗಾದ ಚಾಲಕನಾಗಿದ್ದು ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದು ಖಾಸಗಿ ಬಸ್ ಚಾಲಕ ಪ್ರತಾಪ್ ಎಂಬಾತ ಸುನೀಲ್ ಅವರ ಬಸ್ಸಿಗೆ ತಾನು ಚಲಾಯಿಸುತ್ತಿದ್ದ ಬಸ್ ಅಡ್ಡ ಇಟ್ಟಿದ್ದು, ಈ ಬಗ್ಗೆ ವಿಚಾರಿಸಲು ಹೋದಾಗ ಪ್ರತಾಪನು ಸುನೀಲ್ ಕುಮಾರ್ ಅವರಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಅಲ್ಲದೆ ರಾತ್ರಿ ಮತ್ತೆ ಸಿಟಿಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿಗಳಾದ ಪ್ರತಾಪ್, ಚಂದ್ರ, ವಿನೋದ, ಗಣೇಶ್ ಎಂಬವರು ಸುನೀಲ್ ಅವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.