ಉಳ್ಳಾಲ: ತೊಕ್ಕೊಟ್ಟು ಹಳಿಯಲ್ಲಿ ಪತ್ತೆಯಾದ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ವಿಜಯನ್ ವಿ.ಎ ಮೃತದೇಹದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮೃತರು ನಕಲಿ ಆರೋಗ್ಯ ಸರ್ಟಿಫಿಕೇಟ್ ಪ್ರಕರಣಕ್ಕೆ ಸಂಬಂಧಿಸಿ 10 ದಿನಗಳ ಹಿಂದಷ್ಟೇ ಸಿಬಿಐನಿಂದ ಬಂಧಿತರಾಗಿದ್ದರು. ಇವರ ಜತೆಗೆ ಇನ್ನಿಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು.
ತೊಕ್ಕೊಟ್ಟು ಗಣೇಶನಗರದ ರೈಲ್ವೇ ಹಳಿಯಲ್ಲಿ ವಿಜಯನ್ ಮೃತದೇಹ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ರೈಲ್ವೇ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಬಿಐನಿಂದ ಬಂಧಿಸಲ್ಪಿಟ್ಟಿದ್ದರು !
ದಕ್ಷಿಣ ರೈಲ್ವೇ, ದಕ್ಷಿಣ ನೈಋತ್ಯ ರೈಲ್ವೇ ಹಾಗೂ ಕೊಂಕಣ ರೈಲ್ವೇ ಸಿಬ್ಬಂದಿಗೆ ನಕಲಿ ಆರೋಗ್ಯ ಪ್ರಮಾಣ ಪತ್ರ ನೀಡುವ ಜಾಲವೊಂದು ಒಂದು ವರ್ಷದಿಂದ ಸಕ್ರಿಯವಾಗಿತ್ತು. ಈ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂ.10 ರಂದು ಮಂಗಳೂರಿನಲ್ಲಿರುವ ರೈಲ್ವೇ ಇಲಾಖೆಯ ಸೆಂಟ್ರಲ್ ಸ್ಟೇಷನ್ ಆರೋಗ್ಯ ತಪಾಸಣೆ ಕೇಂದ್ರಕ್ಕೆ ದಾಳಿ ನಡೆಸಿತ್ತು. ಈ ವೇಳೆ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ಇಂದು ಆತ್ಮಹತ್ಯೆ ನಡೆಸಿದ ಫಾರ್ಮಸಿಸ್ಟ್ ವಿಜಯನ್ ಸೇರಿದಂತೆ ಇನ್ನೋರ್ವ ಅಧಿಕಾರಿಗಳನ್ನು ನಕಲಿ ಸರ್ಟಿಫಿಕೇಟ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. ಜಾಲ ಒಟ್ಟು 1500 ನಕಲಿ ಆರೋಗ್ಯ ಪ್ರಮಾಣ ಪತ್ರಗಳನ್ನು ಒಂದು ವರ್ಷದಲ್ಲಿ ಒದಗಿಸಿತ್ತು. ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಶಿವಶಂಕರ ಮೂರ್ತಿ, ಫಾರ್ಮಸಿಸ್ಟ್ ವಿಜಯನ್ ವಿ.ಎ ಹಾಗೂ ಬ್ರೋಕರ್ ಇಬ್ರಾಹಿಂ ಎಂಬವರನ್ನು ಬಂಧಿಸಲಾಗಿತ್ತು. ರೈಲ್ವೇ ಇಲಾಖೆಯ ಕಾನೂನಿನಂತೆ ರೈಲ್ವೇ ಲೈಸೆನ್ಸ್ ಹೊಂದಿರುವ ಮಾರಾಟಗಾರರು, ಹೌಸ್ ಕೀಪಿಂಗ್ ಸ್ಟಾಫ್, ಕ್ಯಾಟರಿಂಗ್ ಕಾರ್ಮಿಕರು ವಾರ್ಷಿಕವಾಗಿ ಫಿಟ್ನೆಸ್ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸಬೇಕಿದೆ. ಇದನ್ನು ಬ್ರೋಕರ್ ಮೂಲಕ ದಂಧೆ ನಡೆಸುತ್ತಿದ್ದ ಅಧಿಕಾರಿಗಳು ಪ್ರಮಾಣ ಪತ್ರ ಬೇಕಾದವರಿಂದ ಆಧಾರ್ ಕಾರ್ಡ್ ಹಾಗೂ ಸಂಬಂಧಿತ ದಾಖಲೆಗಳನ್ನು ವಾಟ್ಸ್ಯಾಪ್ ಮೂಲಕ ಪಡೆದುಕೊಂಡು ರೂ.525 ಅನ್ನು ಗೂಗಲ್ ಪೇ ಮೂಲಕ ಪಡೆದುಕೊಂಡು ಸರ್ಟಿಫಿಕೇಟ್ ನೀಡುತ್ತಿದ್ದರು.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರಿನಲ್ಲಿ ಮಾತ್ರ ರೈಲ್ವೇಯ ಆರೋಗ್ಯ ಇಲಾಖೆಯಿತ್ತು. ಆದರೂ ತಿರುಚನಾಪಳ್ಳಿ, ಬೆಂಗಳೂರು ಸೇರಿದಂತೆ ಹುಬ್ಬಳ್ಳಿಯವರೆಲ್ಲರೂ ಮಂಗಳೂರಿನಿಂದ ಆರೋಗ್ಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿರುವುದರ ವಿರುದ್ಧ ಸಂಶಯ ವ್ಯಕ್ತವಾಗಿತ್ತು. ಈ ದಿಕ್ಕಿನಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ನಡೆಸಿದ ಸಿಬಿಐ ಮಂಗಳೂರಿನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.