ಲಕ್ನೋ: ಮಥುರಾದ ನೌಜಿಲ್ ಪ್ರದೇಶದ ಮುಬಾರಿಕ್ಪುರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವನ್ನು ಆಕೆಯ ಮಾಜಿ ಪ್ರಿಯಕರನೇ ಗುಂಡಿಕ್ಕಿ ಕೊಂದಿದ್ದಾನೆ. ವಧು ಕಾಜಲ್ ತಾನು ಮದುವೆಯಾಗಬೇಕಿದ್ದ ವರನಿಗೆ ವರಮಾಲೆ ಹಾಕಿದ ಕೂಡಲೇ ಆಕೆಯ ಮೇಲೆ ಗುಂಡು ಹಾರಿಸಿ, ಕೊಲ್ಲಲಾಗಿದೆ.
ಆರೋಪಿಯು ಆ ವಧುವಿನೊಂದಿಗೆ ಸಂಬಂಧ ಹೊಂದಿದ್ದ. ಆಕೆಯನ್ನೇ ಮದುವೆಯಾಗಬೇಕು ಎಂದುಕೊಂಡಿದ್ದ. ಆದರೆ, ಆಕೆಯು ಬೇರೆ ಪುರುಷನೊಂದಿಗೆ ಮದುವೆಯಾಗುತ್ತಿದ್ದುದರಿಂದ ಕೋಪಗೊಂಡಿದ್ದ ಆತ ಆಕೆಯ ಮದುವೆ ನಡೆಯುವ ಸ್ಥಳಕ್ಕೆ ಹೋಗಿ ಮಂಟಪದಲ್ಲೇ ಆಕೆಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಗುಂಡಿನ ಸದ್ದು ಕೇಳಿದ ಕೂಡಲೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ವಧು ಸಾವನ್ನಪ್ಪಿದ್ದಳು. ವೇದಿಕೆಯಲ್ಲಿ ವರಮಾಲೆ ಹಾಕಿದ ನಂತರ ನನ್ನ ಮಗಳು ಫ್ರೆಶ್ ಆಗಲು ಕೋಣೆಗೆ ಹೋದಾಗ ಅಪರಿಚಿತ ವ್ಯಕ್ತಿ ಬಂದು ಗುಂಡಿಕ್ಕಿ ಕೊಂದಿದ್ದಾನೆ. ಮದುವೆಯಾಗಬೇಕಿದ್ದ ನನ್ನ ಮಗಳು ಸಾವನ್ನಪ್ಪಿರುವುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ! ಎಂದಿದ್ದಾರೆ.
ಈ ಘಟನೆ ನಡೆದ ಕೂಡಲೇ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಎಲ್ಲ ಆಯಾಮಗಳಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.