ಬೆಂಗಳೂರು : ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿಂದು ರಾಜ್ಯ ಕಾಂಗ್ರೆಸ್ ನಾಯಕರು ಸೈಕಲ್ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಇನ್ನೂ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೈಕಲ್ ಸವಾರಿ ಮಾಡುವ ಮೂಲಕ ದರ ಏರಿಕೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸ್ಪೋರ್ಟ್ಸ್ ಸೈಕಲ್ನಲ್ಲಿ ಶಿವಾನಂದ ವೃತ್ತ ಮತ್ತು ಸರ್ಕಾರಿ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆ ಪ್ರಯಾಣ ಬೆಳೆಸಿದರು. ಸಿಎಂ ಗೃಹ ಕಚೇರಿ ಮುಂದೆಯೇ ಸೈಕಲ್ ಸವಾರಿ ಮಾಡಿದ್ದು, ಸಿದ್ದರಾಮಯ್ಯನವರ ಜೊತೆಗೆ ಕಾಂಗ್ರೆಸ್ ನಾಯಕರಾದ ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಚೆಲುವರಾಯಸ್ವಾಮಿ ಇನ್ನಿತರರು ಸೈಕಲ್ ಸವಾರಿ ಮಾಡಿದರು.

ಇನ್ನು ಸಿದ್ದರಾಮಯ್ಯ ಸೈಕಲ್ ಸವಾರಿ ಸ್ಪೀಡ್ ಗೆ ಕಾಂಗ್ರೆಸ್ ನಾಯಕರು ಸುಸ್ತಾದ್ರು. ಶಿವಾನಂದ ಸರ್ಕಲ್ ಬಳಿಯ ತಮ್ಮ ಸರ್ಕಾರಿ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆ ಸೈಕಲ್ ಏರಿ ಹೊರಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ನಿಲ್ಲಲಿಲ್ಲ. 35 ವರ್ಷಗಳ ಬಳಿಕ ಸೈಕಲ್ ಹೊಡೆದರೂ ತಡಬಡಿಸಲಿಲ್ಲ. 18 ನಿಮಿಷಗಳಲ್ಲಿ ಕೆಪಿಸಿಸಿ ಕಚೇರಿ ತಲುಪಿದರು. ಸಿದ್ದರಾಮಯ್ಯ ಅವರ ಸೈಕಲ್ ಸವಾರಿಯ ಸ್ಪೀಡ್ ಗೆ ಜೊತೆಯಲ್ಲಿದ್ದ ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ ಮತ್ತಿತರರು ಸುಸ್ತಾದರು.
ಸೈಕಲ್ನಲ್ಲಿ ಸಿಲುಕಿದ ಸಿದ್ದರಾಮಯ್ಯ ಪಂಚೆ
.ಇನ್ನು ಕೆಪಿಸಿಸಿ ಕಚೇರಿ ಬಳಿ ಬಂದು ಸೈಕಲ್ ಇಳಿಯುವಾಗ ಸಿದ್ದರಾಮಯ್ಯ ಅವರ ಪಂಚೆ ಸೈಕಲ್ ನಲ್ಲಿ ಸಿಲುಕಿ ಹಾಕಿಕೊಂಡು ಫಜೀತಿ ಅನುಭವಿಸುವಂತಾಯಿತು. ಬಳಿಕ ಅವರ ಆಪ್ತ ಸಹಾಯಕರು ಸಿದ್ದರಾಮಯ್ಯರ ಪಂಚೆ ಬಿಡಿಸಿದ್ದಲ್ಲದೇ, ಅವರ ಕಾಲನ್ನು ಕೂಡ ಸೈಕಲ್ ಮೇಲಿಂದ ತೆಗೆಯಲು ಸಹಾಯ ಮಾಡಿದ್ರು. ಈ ಕ್ಷಣವನ್ನು ಸಿದ್ದರಾಮಯ್ಯ ಮುಗುಳುನಗೆಯಿಂದಲೇ ಎಂಜಾಯ್ ಮಾಡಿದ್ರು, ಹೀಗಾಗಿ ಉಳಿದವರೂ ಒಂದು ಕ್ಷಣ ನಗೆಗಡಲಲ್ಲಿ ತೇಲುವಂತಾಯ್ತು.