ಉಡುಪಿ: ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಹರಿದ್ವಾರದ ಮಧ್ವಾಶ್ರಮದಲ್ಲಿ ಶನಿವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಗುರುಪೂಜೆ ಸಲ್ಲಿಸಿದರು.
1992ರ ನ.17 ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್ ನಲ್ಲಿ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ಮಂತ್ರದೀಕ್ಷೆ ಪಡೆದಿದ್ದ ಸಾದ್ವಿ ಉಮಾಭಾರತಿ,ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ ಸಲ್ಲಿಸಿದರು. ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪಾದಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕೂಟಾಶ್ರಮದ ಶ್ರೀ ರಾಮಕಿಶನ್ ಜೀ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು
ಉಮಾಭಾರತಿಯವರ ಸಂಕಲ್ಪದಂತೆ ಶ್ರೀಮಧ್ವಾಶ್ರಮದಲ್ಲಿ ಎರಡು ದಿನಗಳಿಂದ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಯಾಗ ಸಂಪನ್ನಗೊಂಡಿತ್ತು.ಉಮಾಭಾರತಿ ಅವರು ಶ್ರೀ ವಿಶ್ವೇಶತೀರ್ಥರು ಇದ್ದಷ್ಟೂ ಕಾಲ ಪ್ರತೀವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿ ತೆರಳಿ ವಿಶೇಷ ಕಾರ್ಯಕ್ರಮ ನೆರವೇರಿಸಿ ಗುರುವಂದನೆ ಸಲ್ಲಿಸುತ್ತಿದ್ದರು.
ಶ್ರೀಗಳ ಅಂತಿಮ ದಿನಗಳಲ್ಲಿ ಅವರು ಮಣಿಪಾಲ ಆಸ್ಪತ್ರೆಯಲ್ಲಿದ್ದಾಗಲೂ ಉಡುಪಿಗೆ ಆಗಮಿಸಿದ ಉಮಾಭಾರತಿ, ನಾಲ್ಕೈದು ದಿನಗಳ ಕಾಲ ಉಡುಪಿ, ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ಗುರು ಭಕ್ತಿಯನ್ನು ಮೆರೆದಿದ್ದರು. ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ 75ನೇ ವರ್ಧಂತಿಯನ್ನು ಉಮಾಭಾರತಿಯವರು ದೆಹಲಿಯಲ್ಲಿ ತಮ್ಮ ಮನೆಯಲ್ಲಿ ನಡೆಸಿದ್ದರು. 80ನೇ ವರ್ಧಂತಿಯನ್ನು ಉಡುಪಿಯಲ್ಲಿ ವಿಜ್ರಂಭಣೆಯಿಂದ ಮಾಡಬೇಕೆಂಬ ಮಹದಾಸೆ ಇತ್ತು. ಆ ಅಪೇಕ್ಷೆ ಮಾತ್ರ ಈಡೇರದೇ ಬಾಕಿ ಉಳಿಯಿತು. ಅತೀವ ನೋವು ಮನಸ್ಸಿನಲ್ಲಿ ಉಳಿದಿದೆ ಎಂದು ಈ ಸಂದರ್ಭದಲ್ಲಿ ಉಮಾಭಾರತಿ ನೆನಪಿಸಿಕೊಂಡರು