ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2024ರ ಜನವರಿ ತಿಂಗಳ ಉತ್ತರಾಯಣ ಪ್ರಾರಂಭದಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನಾ ಕಾರ್ಯ ನಡೆಸಲಾಗುತ್ತದೆ ಎಂದು ನಿಶ್ಚಯಿಸಲಾಗಿದೆ. ಅದಕ್ಕೆ ಬೇಕಾದ ಪೂರ್ವಭಾವಿ ಕಾರ್ಯಗಳೆಲ್ಲಾ ನಿಗದಿತ ಕಾಲದಲ್ಲಿಯೇ ನಡೆಯುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಆರಂಭದಲ್ಲಿ ಭೂಮಿಯನ್ನು ದೃಢಪಡಿಸುವ ಕಾರ್ಯ ನಡೆದಿದ್ದು, ಅದರ ಮೇಲೆ ನಡೆಯುವ ಪ್ಲ್ಯಾಟ್ ಫಾರ್ಮ್ ರಚನೆಯೂ ಸಂಪೂರ್ಣಗೊಳ್ಳುತ್ತಾ ಬಂದಿದೆ. ಕರ್ನಾಟಕದಿಂದಲೇ ಹೋಗಿರುವ ಶಿಲೆಗಳಿಂದ ಫ್ಲ್ಯಾಟ್ ಫಾರ್ಮ್ ನಿರ್ಮಾಣವಾಗಿದೆ. ಗರ್ಭಗುಡಿಯ ಶಿಲಾನ್ಯಾಸ ಜೂನ್ 1ರಂದು ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿಯೂ ನಾವು ಭಾಗವಹಿಸಲಿದ್ದೇವೆ ಎಂದು ಹೇಳಿದರು.
ವಾರಣಾಸಿಯ ಗ್ಯಾನವ್ಯಾಪಿ ಮಂದಿರದ ಬಾವಿಯಲ್ಲಿ ಶಿವಲಿಂಗ ಪತ್ತೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು, ನಮ್ಮ ಈ ತನಕದ ನಂಬಿಕೆಗಳು, ಪುರಾಣಗಳ ಉಲ್ಲೇಖಗಳು ಸತ್ಯ ಎಂಬುದು ಸಾಬೀತಾಗುತ್ತಿದೆ. ಹಾಗಾಗಿ ಇದನ್ನು ನಾವು ಹತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಮಾತ್ರವಲ್ಲ ಇಂತಹ ಅತಿಕ್ರಮಗಳೆಲ್ಲವೂ ಬೇಗನೆ ದೂರವಾಗಿ, ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಲೆಂದು ಆಶಿಸುತ್ತಿದ್ದೇವೆ. ಇವೆಲ್ಲವೂ ಕೋರ್ಟ್ ತೀರ್ಪು ಮುಖೇನ ನಡೆಯುತ್ತಿದೆ. ಆದ್ದರಿಂದ ಯಾರೂ ಸಂಘರ್ಷಕ್ಕೆ ಇಳಿಯದೆ ಸ್ವಾಗತಿಸಬೇಕು ಎಂದು ಹೇಳಿದರು.