ಹಾಸನ ;ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೂರು ಗ್ರಾಮದಲ್ಲಿ ಕವಿತಾ (40ವರ್ಷ) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ವಡೂರು ಗ್ರಾಮದಲ್ಲಿ ತನ್ನ ಅಮ್ಮನನ್ನು ನೋಡಲೆಂದು ಬಂದಿದ್ದ ಕವಿತಾ ಅವರನ್ನು ಮನೆ ಬಳಿ ಇದ್ದಾಗಲೇ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು, ಕೆಳಗೆ ಬಿದ್ದ ಕವಿತಾರ ಮೇಲೆ ಆನೆ ದಾಳಿ ಮಾಡಿತ್ತು. ಸೊಂಟದ ಭಾಗವನ್ನು ತುಳಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.ನಾರ್ವೇ ಮೂಲದ ಕವಿತಾ ಪತಿ ಬೈರಯ್ಯ ಇತ್ತೀಚೆಗೆ ನಿಧನ ಹೊಂದಿದ್ದರು. ಇವರಿಗೆ ಮೂವರು ಗಂಡುಮಕ್ಕಳಿದ್ದಾರೆ.
ಸಕಲೇಶಪುರ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸತತವಾಗಿ ಜೀವಹಾನಿ ಸಂಭವಿಸುತ್ತಲೇ ಇವೆ. ಕಾಡಾನೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬೆಳೆಗಾರರ ಸಂಘಟನೆ ಮತ್ತು ರೈತಸಂಘಟನೆಗಳು ಆಗ್ರಹಿಸಿವೆ.