ಕಡಬ; ಬಾವಿಗೆ ಹಾಕಿದ್ದ ಪೈಪ್ ತೆಗೆದಿದ್ದನ್ನು ಪ್ರಶ್ನಿಸಿದ್ದಕ್ಕೆ ವೃದ್ಧನಿಗೆ ಹಲ್ಲೆ ಮಾಡಿರುವ ಘಟನೆ ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳದಲ್ಲಿ ನಡೆದಿದೆ. ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ನಿವಾಸಿ ಶೀನಪ್ಪ ಗೌಡ (75) ಹಲ್ಲೆಗೊಳಗಾದವರು.
ಶೀನಪ್ಪ ಗೌಡ ಅವರು ತನ್ನ ಮನೆಯ ಅಂಗಳದ ಬಳಿ ವೀಳ್ಯದೆಲೆ ಕೊಯ್ಯುತ್ತಿರುವಾಗ ಅಣ್ಣನ ಮಗ ರಾಮಣ್ಣ ಗೌಡ ಎಂಬವರು ಬಂದು ಬಾವಿಗೆ ಅಳವಡಿಸಿದ ಪೈಪನ್ನು ತೆಗೆಯುತ್ತಿದ್ದರು. ಈ ವೇಳೆ ಶೀನಪ್ಪ ಗೌಡ ಅವರು ನೀನು ಪೈಪು ಯಾಕೆ ತೆಗೆಯುತ್ತೀಯಾ ಎಂದು ಕೇಳಿದ್ದರು. ಆ ವೇಳೆ ನೀವು ಈ ಬಾವಿಯ ನೀರನ್ನು ಕುಡಿಯಬಾರದೆಂದು ಹೇಳಿ ಶೀನಪ್ಪ ರವರ ಕುತ್ತಿಗೆಯನ್ನು ಎರಡೂ ಕೈಯಿಂದ ಬಿಗಿಯಾಗಿ ಹಿಡಿದು ತಿರುಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.ಈ ವೇಳೆ ಶೀನಪ್ಪ ಗೌಡ ಅವರು ಕಿರುಚಾಡಿದ್ದಾರೆ. ಆಗ ಮನೆಮಂದಿ ಹಾಗೂ ನೆರಮನೆಯವರು ಬಂದಿದ್ದಾರೆ. ಈ ವೇಳೆ ರಾಮಣ್ಣ ಗೌಡ ಶೀನಪ್ಪ ಗೌಡ ಅವರನ್ನು ನೆಲಕ್ಕೆ ದೂಡಿ ಹಾಕಿ ಪಕ್ಕದಲ್ಲಿದ್ದ ದೊಣ್ಣೆಯಿಂದ ಸೊಂಟಕ್ಕೆ ಮತ್ತು ಕುತ್ತಿಗೆಯ ಬಳಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಹೋಗಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.ಹಲ್ಲೆ ನಡೆಸಿದ ಪರಿಣಾಮ ನೋವು ಉಲ್ಬಣಗೊಂಡಿರುವುದರಿಂದ ಮನೆಯವರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


