ಇಡುಕ್ಕಿ : ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ತತ್ತರಿಸಿ ಸಾವು-ನೋವು ಹೆಚ್ಚಾಗುತ್ತಲೇ ಇವೆ. ಕೇರಳದ ವಿವಿಧೆಡ ನೆರೆ ಹಾವಳಿಯಿಂದ ಈವರೆಗೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಕುಂಭ್ರದ್ರೋಣ ಮಳೆಯಿಂದ ಕೇರಳ ತತ್ತರಿಸಿದ್ದು, ಇಡುಕಿ ಜಿಲ್ಲೆಯ ಮನ್ನಾರ್ ಪರ್ವತಸ್ತೋಮದ ಹಲವೆಡೆ ಮೊನ್ನೆ ನಸುಕಿನಲ್ಲಿ ಭೂಕುಸಿತಗಳು ಸಂಭವಿಸಿದ್ದು, ಮೃತರ ಸಂಖ್ಯೆ 45ಕ್ಕೇರಿದೆ. ಈ ದುರ್ಘಟನೆಯಲ್ಲಿ ಸುಮಾರು 50 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ತೀವ್ರ ಶೋಧದ ನಂತರ ನಿನ್ನೆ ಮಧ್ಯಾಹ್ನದಿಂದ ಇಂದು ಬೆಳಗ್ಗೆವರೆಗೆ 19 ಮೃತದೇಹಗಳು ಪತ್ತೆಯಾಗಿದ್ದು, ಸತ್ತವರ ಸಂಖ್ಯೆ 45ಕ್ಕೇರಿದೆ. ಗುಡ್ಡ ಮತ್ತು ಭೂಕುಸಿತಗಳಿಂದಾಗಿ ಕಣ್ಣನ್ ದೇವನ್ ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದೇ ಕುಟುಂಬದ 90ಕ್ಕೂ ಹೆಚ್ಚು ಕಾರ್ಮಿಕರು ಮಣ್ಣಿನ ಆವಶೇಷಗಳಡಿ ಸಿಲುಕಿದರು.
ಈವರೆಗೆ 45 ಶವಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಡುಕ್ಕಿ ಜಿಲ್ಲೆಯ ರಾಜಮಾಲಾ ಮತ್ತು ಮನ್ನಾರ್ ಪರ್ವತ ಶ್ರೇಣಿಯ ಪೆಟ್ಟಿಮುಡಿಯ ಹಲವೆಡೆ ನಿನ್ನೆ ಕೂಡ ಧಾರಾಕಾರ ಮಳೆಯಿಂದ ಭೂಕುಸಿತಗಳು ಸಂಭವಿಸಿವೆ.
ಕೇರಳದ ಹಲವು ಜಿಲೆಗಳಲ್ಲಿ ವರುಣಾಸುರನ ಆರ್ಭಟ ತೀವ್ರಗೊಂಡಿದೆ. ಇಡುಕ್ಕಿ, ಪಾಲಾಕ್ಕಾಡ್, ಶ್ರಿಶೂರ್, ವಯನಾಡ್, ಕಣ್ಣೂರು, ಗುರುವಾಯೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ಸಾವು-ನೋವು ಮತ್ತು ಭಾರೀ ಹಾನಿಯ ವರದಿಯಾಗಿದೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಮುಂದಿನ 24 ತಾಸುಗಳಲ್ಲಿ ಕೇರಳದ ವಿವಿಧೆಡೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಪಕೃತಿ ವಿಕೋಪ ನಿರ್ವಹಣಾ ಪಡೆಗಳಾದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಪಿ ಯೋಧರು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದಾರೆ.