ಶಿವಮೊಗ್ಗ: “ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಧಿಕಾರಕ್ಕೆ ಬಂದಾಗಲೆಲ್ಲ ಬರ ಪರಿಸ್ಥಿತಿ ತಲೆದೋರಿದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅವರು ಸಂಸದ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಯ ನಂತರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ‘ನಾನು ಸರ್ಕಾರ ಮಾಡಿದ್ದೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸರ್ಕಾರ ಮಾಡಿದ್ದಾರೆ. ಆಗೆಲ್ಲಾ ಬರ ಬಂದಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬಂದಿದೆ. ಇನ್ನು ನಮ್ಮ ಮೈತ್ರಿ ಸರ್ಕಾರದಲ್ಲಿ ಸಾರಾಯಿ ನಿಷೇಧ ಮಾಡಲಾಗಿತ್ತು. ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಇವತ್ತು ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಹಿಳೆಯರಿಗೆ ₹1ಲಕ್ಷ ಹಣ ನೀಡುವುದಾಗಿ ಹೇಳಿದೆ. 75 ಕೋಟಿ ತಾಯಂದಿರು ಈ ದೇಶದಲ್ಲಿದ್ದಾರೆ. ಅವರಿಗೆಲ್ಲ ಹಣ ನೀಡಲು ₹75 ಲಕ್ಷ ಕೋಟಿ ಬೇಕು. ಈಗಿನ ಬಜೆಟ್ ₹47 ಲಕ್ಷ ಕೋಟಿ ಮಾತ್ರ. ಉಳಿದ ಹಣ ಎಲ್ಲಿಂದ ತರುತ್ತಾರೆ, ಎಂದು ವ್ಯಂಗ್ಯವಾಡಿದರು.
‘ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ₹2 ಸಾವಿರ ನೀಡಲಾಗುತ್ತಿದೆ. ಆದರೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಆಸ್ತಿ ನೋಂದಣಿ ದರ ಹೆಚ್ಚಿಸಿದ್ದಾರೆ. ಹೀಗಾಗಿ ಇದು ಪಿಕ್ ಪಾಕೆಟ್ ಸರ್ಕಾರವಾಗಿದೆ’ ಎಂದರು