ಬೆಳ್ತಂಗಡಿ :ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದ ಡಾ..ಬಿ.ಯಶೋವರ್ಮರವರು ಸೋಮವಾರ ಬೆಳಗ್ಗಿನ ಜಾವ 4:30 ರ ಸುಮಾರಿಗೆ ಅನಾರೋಗ್ಯದಿಂದ ಸಿಂಗಾಪೂರದಲ್ಲಿ ನಿಧನರಾಗಿದ್ದು ಅವರ ಮೃತದೇಹದ ಸಾಗಿಸುವ ಬಗ್ಗೆ ಕಾನೂನು ಪ್ರಕ್ರಿಯೆ ಸೋಮವಾರ ಮಧ್ಯಾಹ್ನ ಮುಗಿಸಿದ್ದು ಸೋಮವಾರ ರಾತ್ರಿ 12 ಗಂಟೆಗೆ ಸಿಂಗಾಪುರದಿಂದ ಇಂಡಿಗೋ ವಿಮಾನದಲ್ಲಿ ಪಾರ್ಥೀವ ಶರೀರ ಹೊರಟು ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ಕಾನೂನು ಪ್ರಕ್ರಿಯೆ ಮುಗಿಸಿಕೊಂಡ ಬಳಿಕ ಸುಮಾರು 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಂಬ್ಯುಲೆನ್ಸ್ ನಲ್ಲಿ ರಸ್ತೆಯ ಮೂಲಕ ಚಾರ್ಮಾಡಿಗೆ ಅಗಮಿಸಿ ಮತ್ತೂರು ದೇವಸ್ಥಾನದ ಪಕ್ಕದ ಅಂಗಣದಿಂದ ಸುಮಾರು 1 ಗಂಟೆಗೆ ಮೆರವಣಿಗೆ ಮೂಲಕ ಉಜಿರೆ ಸರ್ಕಲ್ ಗೆ ಆಗಮಿಸಿ ಅಲ್ಲಿಂದ ಎಲ್ಲರೂ ತೆರೆದ ವಾಹನದ ಕಾಲ್ನಡಿಗೆಯಲ್ಲಿ ತೆರಳಲಿದ್ದಾರೆ. ಬಳಿಕ ಉಜಿರೆ ಎಸ್.ಡಿ.ಎಂ ಕಾಲೇಜ್ ಒಳಾಂಗಣದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಂಜೆ ನೀರಚಿಲುಮೆಯ ಅವರ ನಿವಾಸದಲ್ಲಿ ಅಂತ್ಯಸಂಸ್ಕಾರ ಕಾರ್ಯ ನೇರವೆರಲಿದೆ.
ಡಾ.ಬಿ.ಯಶೋವರ್ಮವರು ಸಿಂಗಾಪೂರಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆ ಚಿಕಿತ್ಸೆಗಾಗಿ ಹೋಗಿದ್ದರು ಆದ್ರೆ ಕಳೆದ 15 ದಿನದಿಂದ ಚಿಕಿತ್ಸೆ ಆರಂಭವಾಗಿತ್ತು. ಭಾನುವಾರ ಆರೋಗ್ಯ ತೀವ್ರ ಹದಗೆಟ್ಟಿದ್ದು ಸಿಂಗಪೂರದ 1 ಗಂಟೆಗೆ ಅಂದರೆ ಭಾರತ ದೇಶದ ಕಾಲಮಾನ ಸೋಮವಾರ ಬೆಳಗ್ಗಿನ ಜಾವ 4:30 ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಚಿಕಿತ್ಸೆ ವೇಳೆ ಡಾ.ಬಿ.ಯಶೋವರ್ಮರ ಜೊತೆಯಲ್ಲಿದ್ದರು.
ಸೋಮವಾರ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗೆ ರಜೆ ನೀಡಲಾಗಿತ್ತು. ನಾಳೆ ಮಂಗಳವಾರ ಕೂಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ನಾಳೆ 12 ಗಂಟೆಯಿಂದ ಉಜಿರೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುವುದು ಎಂದು ವರ್ತಕರ ಸಂಘದಿಂದ ತೀರ್ಮಾನಿಸಲಾಗಿದೆ.
ಇಂದು ಸಂಜೆ 4 ಗಂಟೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಟ್ರಸ್ಟ್ ಜೊತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳ ಸೇರಿ ನಡೆಸಿದ ಅಂತಿಮದರ್ಶನದ ವ್ಯವಸ್ಥೆ ಬಗ್ಗೆ ಸಭೆ ನಡೆಸಲಾಯಿತು. ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ, ಎಸ್.ಕೆ.ಆರ್.ಡಿ.ಪಿ ,ಉಜಿರೆ ವರ್ತಕರ ಸಂಘ, ರಿಕ್ಷಾ ಚಾಲಕರ ಸಂಘ , ಸೌರ್ಯ ತಂಡ, ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಮೆರವಣಿಗೆಗೆ ಹಾಗೂ ಅಂತಿಮ ದರ್ಶನಕ್ಕೆ ಸಹಕಾರ ನೀಡಲಿದ್ದಾರೆ.