ಚಿಕ್ಕಮಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲೆಯಲ್ಲಿ ಕ್ರಮೇಣ ಕೋವಿಡ್ ಕೇಸ್ ಗಳು ಹೆಚ್ಚುತ್ತಿದ್ದು, ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಪ್ರವಾಸಿಗರ ನಿಯಂತ್ರಣ ಅನಿವಾರ್ಯವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಹೇಳಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯೂ ಆಗುತ್ತಿರುವ ಕಾರಣ ಪ್ರವಾಸಿಗರಲ್ಲಿ ಸೋಂಕು ಪತ್ತೆಯಾದರೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಕಷ್ಟ ಸಾಧ್ಯವಾಗುತ್ತದೆ. ಹಾಗಾಗಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಉತ್ತಮ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.
ಒಂದು ವೇಳೆ ಈಗಾಗಲೇ ಪ್ರವಾಸ ನಿಗದಿಯಾಗಿದ್ದರೆ 72 ಗಂಟೆಗಳ ಆರ್ ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯ ಎಂದು ಹೇಳಿರುವ ಜಿಲ್ಲಾಡಳಿತ, ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಉಲ್ಬಣಿಸದಂತೆ ತಡೆಯಲು ಪ್ರವಾಸವನ್ನು ಮೊಟಕುಗೊಳಿಸಿ ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಪ್ರವಾಸಿಗರಲ್ಲಿ ಮನವಿ ಮಾಡಲಾಗಿದೆ.