ಸುಬ್ರಹ್ಮಣ್ಯ: ವರುಣ ಸುಬ್ರಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಷ್ಟೊಂದು ಅವಾಂತರ ಸೃಷ್ಟಿಸಿದ್ದಾನೆ ಎಂಬುವುದನ್ನು ನಾವು ನೀವು ಪ್ರತಿದಿನ ನೋಡುತ್ತಲೇ ಇದ್ದೇವೆ.
ಆ.1ರಂದು ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಕೊಲ್ಲಮೊಗ್ರದ ಹೊಳೆಯು ಇಡೀ ಗ್ರಾಮವನ್ನು ಆವರಿಸಿ ಅನೇಕ ಮನೆಗಳಿಗೆ ನೆರೆ ನೀರು ನುಗ್ಗಿ ಬಹಳಷ್ಟು ಅವಾಂತರಗಳು ಸೃಷ್ಟಿಸಿತ್ತು.ಇದೇ ವೇಳೆ ದೋಲನಮನೆ ಲಲಿತಾ ಅವರ ಮನೆಗೆ ನೆರೆ ನೀರು ನುಗ್ಗುತ್ತಿದ್ದಂತೆ ಅವರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಅವರ ಪುತ್ರ ಹೇಮಂತ್ ಸುಬ್ರಹ್ಮಣ್ಯಕ್ಕೆ ಬಂದವರು ಮನೆಗೆ ಹಿಂದಿರುಗುತ್ತಿದ್ದಾಗ ಹರಿಹರ ಹೊಳೆಯಲ್ಲಿ ಬಹಳಷ್ಟು ನೀರು ಏರಿಕೆಯಾಗಿದ್ದರಿಂದ ಮನೆಗೆ ತಲುಪಲಾಗದೆ ಮರುದಿನ ನೀರು ಇಳಿಮುಖವಾದ ನಂತರ ಬಂದರು. ಈ ವೇಳೆ ಅಲ್ಲಿ ಬಹಳಷ್ಟು ಅನಾಹುತಗಳು ನಡೆದು ಹೋಗಿದ್ದವು.
ನೆರೆ ನೀರು ಇಡೀ ಮನೆಯನ್ನು ಆವರಿಸಿದ ಪರಿಣಾಮ ಅವರ ಮನೆ ನೆಲಕಚ್ಚಿತ್ತು. ಮನೆಯಲ್ಲಿದ್ದ ಅನೇಕ ವಸ್ತುಗಳು ನೆರೆಯ ಪಾಲಾದವು. ಹಸುವೊಂದು ನೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಪಮೋರಿಯನ್ ಜಾತಿಯ ಶ್ವಾನಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು. ಎಲ್ಲವನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ಅವರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎರಡು ದಿನಗಳ ಬಳಿಕ ನೀರಿನಲ್ಲಿ ಕೊಚ್ಚಿ ಹೋದ ಅವರ ರಾಜು- ರಾಣಿ ಎಂಬ ನಾಯಿಗಳು ಬದುಕಿವೆ ಎಂಬ ವಿಚಾರ ಗೊತ್ತಾಗಿದೆ. ಕೊಂಚ ನಿರಾಳರಾಗಿದ್ದಾರೆ.
ಇನ್ನು ಈ ಶ್ವಾನಗಳ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಗ್ರಾಮ ಪಂಚಾಯಿತಿ ಸದಸ್ಯ ಮಾಧವ ಚಾಂತಳ ಸಹಕರಿಸಿದ್ದು ಅವರಿಗೆ ಹೇಮಂತ್ ಧನ್ಯವಾದ ಹೇಳಿದ್ದಾರೆ.