ಸುಬ್ರಹ್ಮಣ್ಯ: ಭೂ ಕುಸಿತದಿಂದಾಗಿ ನಲುಗಿರುವ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರ ಬದುಕು ಆತಂಕದಲ್ಲೇ ಕಳೆಯುವಂತಾಗಿದೆ. ಹೀಗಾಗಿ ಅಪಾಯಕಾರಿ ಸ್ಥಳದಲ್ಲಿರುವ ಸ್ಥಳೀಯರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕಲ್ಮಕಾರು ಗ್ರಾಮದ ಗುಳಿಕಾನದ ಸುಮಾರು 9 ಮನೆಯವರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಿತ್ತು. ಮೂರು ಕುಟುಂಬಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಉಳಿದ ಆರು ಕುಟುಂಬಗಳ 21 ಜನರನ್ನು ಕಲ್ಮಕಾರಿನ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಕಂದಾಯ ನಿರೀಕ್ಷಕ ಶಂಕರ್, ಪಿಡಿಒ, ಗ್ರಾಮ ಪಂಚಾಯತಿ ಸದಸ್ಯರು ಅಲ್ಲಿನ ನಿವಾಸಿಗಳನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಳಜಿ ಕೇಂದ್ರಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು. ಕಾಳಜಿ ಕೇಂದ್ರದ ಜನರಿಗೆ ಆಹಾರ ಸಾಮಗ್ರಿ ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.