ಪುತ್ತೂರು: ದಾರಿಯಲ್ಲಿ ಸಿಕ್ಕಿದ 8000 ರೂಪಾಯಿ ಹಣವನ್ನು ಹಣ ಕಳೆದುಕೊಂಡ ವಾರಿಸುದಾರನಿಗೆ ನೀಡಿ ವಿದ್ಯಾರ್ಥಿ ಪ್ರಜ್ವಲ್ ಪ್ರಾಮಾಣಿಕತೆ ಮೆರೆದಿದ್ದಾರೆ.
ವೀರಮಂಗಲ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಪ್ರಜ್ವಲ್, ಪ್ರಸ್ತುತ ಎಸ್ ಜಿ ಎಂ ಶಾಲೆ ಭಕ್ತಕೋಡಿಯ ವಿದ್ಯಾರ್ಥಿಯಾಗಿದ್ದಾರೆ.
ವೀರಮಂಗಲದ ಶ್ರೀ ದೇವಿ ಸ್ಟೋರ್ ನ ಬಾಡಿಗೆ ಮನೆಯಲ್ಲಿರುವ ತಮಿಳುನಾಡಿನ ನಿವಾಸಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಹಣ ಕಳೆದುಕೊಂಡಿದ್ದ ವಿಷಯವನ್ನು ಶ್ರೀ ದೇವಿ ಸ್ಟೋರ್ನ ಮಾಲಿಕರು ಶಾಲೆಯಲ್ಲಿ ತಿಳಿಸಿದ್ದರು. ಈ ವಿಚಾರವನ್ನು ಶಾಲಾ ಮಕ್ಕಳಿಗೆ ಕೂಡಾ ತಿಳಿಸಲಾಗಿತ್ತು .
ಶಾಲೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ಗೆ ಮಾರ್ಗದ ಬದಿ 8000 ಇದ್ದ ಹಣದ ಕಟ್ಟು ಸಿಕ್ಕಿತ್ತು. ಮನೆಯವರಲ್ಲಿ ವಿಷಯ ತಿಳಿಸಿದಾಗ ಪ್ರಜ್ವಲ್ ತಂಗಿ ಹಣ ಕಳೆದುಕೊಂಡವರ ಬಗ್ಗೆ ಶಾಲೆಯಲ್ಲಿ ಹೇಳಿದ ವಿಚಾರವನ್ನು ಹೇಳಿದ್ದಳು.
ತಕ್ಷಣ ಪ್ರಜ್ವಲ್ ತಂದೆ ಲಿಂಗಪ್ಪ ಗೌಡ ಶಾಲೆಯ ಮುಖ್ಯಗುರುಗಳಿಗೆ ಪೋನಾಯಿಸಿ ಹಣ ಸಿಕ್ಕಿರುವ ವಿಷಯ ತಿಳಿಸಿದ್ದಾರೆ. ಮರುದಿನ ಹಣದ ವಾರಸುದಾರರನ್ನು ಶಾಲೆಗೆ ಬರಲು ಹೇಳಿ ಹಣವನ್ನು ನೀಡಿ ಪ್ರಜ್ವಲ್ ಹಾಗೂ ಮನೆಯವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹಣಕಳೆದುಕೊಂಡಿದ್ದ ವ್ಯಕ್ತಿ ಪ್ರಜ್ವಲ್ ಗೆ ಬಹುಮಾನ ರೂಪವಾಗಿ 500 ರೂಪಾಯಿ ಹಾಗೂ ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಂಚಿ ಕೃತಜ್ಣತೆ ಅರ್ಪಿಸಿದ್ದಾರೆ.