ಉಡುಪಿ: ತೀವ್ರ ವಿರೋಧಗಳ ನಡುವೆಯೂ ನಿನ್ನೆಯಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗಬೇಕು ಎಂಬ ಅಭಿಪ್ರಾಯವಿತ್ತು. ಆದರೆ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಪರೀಕ್ಷೆ ನಡೆಸುತ್ತಿದೆ.
ಈ ವಿಚಾರ ಬರೀ ಪರೀಕ್ಷೆಯದಷ್ಟೇ ಅಲ್ಲಾ, ಉಡುಪಿ ಜಿಲ್ಲೆಯ 10 ವರ್ಷದ ವಿಶೇಷ ಚೇತನ ಬಾಲಕಿಯೊಬ್ಬಳು ನಿನ್ನೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಉಡುಪಿಯ ಕಲ್ಯಾಣಪುರದ ನಿವಾಸಿಗಳಾದ ಸುಧೀರ್ ಮತ್ತು ರೇಣುಕಾ ದಂಪತಿಯ ಪುತ್ರಿ ಸಿಂಧೂರಿ ಈಕೆ. ಕಲ್ಯಾಣಪುರದ ಮೌಂಟ್ ರೊಸರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಈಕೆ ಓದಿನಲ್ಲೂ ಮುಂದು. ಸ್ಕೌಟ್ಸ್ ಆಂಡ್ ಗೈಡ್ನಲ್ಲಿ ಬುಲ್ ಬುಲ್ ಆಗಿರೋ ಸಿಂಧೂರಿ ಕೋರೋನಾ ಸಮರದಲ್ಲಿ ಕೈಜೋಡಿಸಿದ್ದಾಳೆ.
ಮಾಸ್ಕ್ ಹೊಲಿಯುವ ಮೂಲಕ ಕೊರೋನಾ ಸಮರದಲ್ಲಿ ತನ್ನನೂ ತೊಡಗಿಸಿಕೊಂಡಿದ್ದಾಳೆ. ನಾವು ನೀವು ಮಾಸ್ಕ್ ಹೊಲಿದ್ರೆ ಅದು ಮಹಾನ್ ಸಾಧನೆ ಯಲ್ಲ ಬಿಡಿ. ಅದ್ರೆ ಈಕೆಗೆ ಹುಟ್ಟಿನಿಂದಲೇ ಒಂದು ಕೈ ಬೆಳವಣಿಗೆ ಇಲ್ಲ. ಬಲಗೈ ಮಾತ್ರ ಸಹಜವಾಗಿದೆ. ಎಡಗೈ ಬೆಳವಣಿಗೆಯಾಗಿಲ್ಲ. ಈಕೆ ಒಂದೇ ಕೈ ಬಳಸಿ 15 ಮಾಸ್ಕ್ ತಯಾರಿ ಮಾಡಿದ್ದಾಳೆ.. ಅಷ್ಟೇ ಅಲ್ಲದೇ ನಿನ್ನೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಾನು ಹೊಲಿದ ಮಾಸ್ಕ್ಗಳನ್ನ ನೀಡಿದ್ದಾಳೆ.
ಈ ಮೂಲಕ ಸರ್ಕಾರಕ್ಕೆ ತನ್ನ ಅಳಿಲು ಸೇವೆ ನೀಡಿದ್ದಾಳೆ. ಸದ್ಯ ಈಕೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಎಷ್ಟರ ಮಟ್ಟಿಗೆ ಎಂದರೆ, ಈಕೆಯ ಕಾರ್ಯ ಮೆಚ್ಚಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಟ್ವೀಟ್ ಮಾಡಿ ಶಹಬಾಸ್ ಎಂದಿದ್ದಾರೆ.