ಬೆಂಗಳೂರು: ಹಿರಿತೆರೆ ಹಾಗೂ ಕಿರುತೆರೆ ನಿರ್ದೇಶಕ ವಿನೋದ್ ದೊಂಡಾಲೆ ನೇಣಿಗೆ ಶರಣಾಗಿದ್ದಾರೆ.ಸಾಲದ ಸುಳಿಗೆ ಸಿಲುಕಿದ್ದ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿನೋದ್ ಅವರು ಸಿನಿಮಾ ಹಾಗೂ ವೈಯಕ್ತಿಕ ಜೀವನ ನಿರ್ವಹಣೆಗೆ ಹಲವರಿಂದ ಸಾಲಗಳನ್ನು ಮಾಡಿಕೊಂಡಿದ್ದರಂತೆ. ಈಗ ಸಾಲ ತೀರಿಸಲು ಆಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಸಿನಿಮಾವನ್ನು ವಿನೋದ್ ನಿರ್ದೇಶನ ಮಾಡುತ್ತಿದ್ದರು. ‘ಅಶೋಕ್ ಬ್ಲೇಡ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ. ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ‘ಅಶೋಕ ಬ್ಲೇಡ್’ ಸಿನಿಮಾದ ನಿರ್ಮಾಪಕರ ಜೊತೆ ಶೂಟಿಂಗ್ ಬಗ್ಗೆ ವಿನೋದ್ ಚರ್ಚಿಸಿದ್ದರಂತೆ. ಆದರೆ ಆ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿನಿಮಾ ಅಲ್ಲದೆ ಕಿರುತೆರೆಯಲ್ಲಿಯೂ ವಿನೋದ್ ಕೆಲಸ ಮಾಡಿದ್ದು ‘ಕರಿಮಣಿ’ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದರು.
ಮೂವರು ಮಕ್ಕಳು ಹಾಗೂ ಪತ್ನಿಯನ್ನು ವಿನೋದ್ ಅಗಲಿದ್ದಾರೆ. ವಿನೋದ್ ನಿಧನಕ್ಕೆ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.