ಉಡುಪಿ: ದೇಶದಾದ್ಯಂತ ಹಿಜಾಬ್ ಕಿಚ್ಚು ಹತ್ತಿಸಿದ ಉಡುಪಿಯ ಆರು ಜನ ಹಿಜಾಬ್ ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ಬರೆಯೋದು ಸಂದೇಹ ಎನ್ನಲಾಗುತ್ತಿದೆ.
ನಾಳೆಯಿಂದ ರಾಜ್ಯಾದ್ಯಂತ ಶುಕ್ರವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದೆ. ಹಿಜಾಬ್ ಹೋರಾಟದ ವಿಚಾರಕ್ಕೆ ನಾಳೆ ಆರಂಭವಾಗಲಿರುವ ಪರೀಕ್ಷೆಗಳು ಭಾರೀ ನಿರೀಕ್ಷೆಗೆ ಕಾರಣವಾಗಿದೆ. ಶೈಕ್ಷಣಿಕ ಜೀವನದ ಮಹತ್ವದ ಘಟ್ಟ ಆಗಿರುವುದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕ್ಲಾಸಿಗೆ ಬಂದು ಪರೀಕ್ಷೆ ಬರೆಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಅದರಲ್ಲೂ ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯುತ್ತಾರಾ? ಹೈ ಕೋರ್ಟ್ ತೀರ್ಪಿನಂತೆ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುತ್ತಾರೆ ಎಂಬ ಕುತೂಹಲಗಳು ಇವೆ. ಉಡುಪಿಯ ಆರು ಜನ ಹಿಜಾಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಕಾಮರ್ಸ್ ವಿಭಾಗದ ಪರೀಕ್ಷೆಗಳು ನಾಳೆ ನಡೆಯಲಿದ್ದು ನಾಲ್ವರ ಪೈಕಿ ಇಬ್ಬರಿಗೆ ಪರೀಕ್ಷೆ ಇದೆ. ಹಾಗಾಗಿ ಅವರು ಹಾಜರಾಗೋದು ಡೌಟು ಎಂದು ಹೇಳಲಾಗುತ್ತಿದೆ.
ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಕ್ಕಿಗಾಗಿ ಡಿಸೆಂಬರ್ ಕಡೆಯ ವಾರದಿಂದ ಬಹಿರಂಗ ಹೋರಾಟ ನಡೆಸಿದ್ದರು. ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಹಿಜಾಬ್ ಗೆ ಅವಕಾಶ ಇಲ್ಲ ಎಂಬ ಮಹತ್ವದ ತೀರ್ಪು ಹೊರಬಿದ್ದಿತ್ತು. ಆನಂತರ ಆರು ವಿದ್ಯಾರ್ಥಿಗಳು ತರಗತಿಗೆ ಪೂರ್ವಭಾವಿ ಪರೀಕ್ಷೆಗಳಿಗೆ ಹಾಜರಾಗಿರಲಿಲ್ಲ. ಆರರ ಪೈಕಿ ಇಬ್ಬರು ಪ್ರಥಮ ಪಿಯು ಪರೀಕ್ಷೆಗೆ ಬಂದಿರಲಿಲ್ಲ. ಹೀಗಾಗಿ ನಾಳೆಯಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಗೂ ನಾಲ್ವರು ವಿದ್ಯಾರ್ಥಿಗಳು ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.