ಮೈಸೂರು: ನಂಜನಗೂಡು ತಾಲ್ಲೂಕು ಉಪ್ಪಿನಹಳ್ಳಿ ಗ್ರಾಮದಲ್ಲಿ ವಿರಳ ಘಟನೆಯೊಂದು ನಡೆದಿದೆ. ದೇವಿಯ ತಾಳಿ ಕದ್ದು ನಂತರ, ಅದನ್ನು ಕಳ್ಳರು ವಾಪಸ್ಸು ಮಾಡಿದ್ದಾರೆ. ಜೊತೆಗಿರಲಿ ಎಂದು ತಪ್ಪು ಕಾಣಿಕೆಯಾಗಿ 101 ರೂ ಹಣವನ್ನೂ ನೀಡಿದ್ದಾರೆ.
ಉಪ್ಪಿನಹಳ್ಳಿ ಗ್ರಾಮದ ದುರ್ಗಾಂಭ ದೇವಸ್ಥಾನದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕಳೆದ ವಾರವಷ್ಟೇ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿತ್ತು. ಹುಂಡಿ ಜೊತೆ ದೇವರ ತಾಳಿಯನ್ನು ಸಹ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸ್ ಕಂಪ್ಲೇಂಟ್ ಬಳಿಕ ನಾಲ್ಕು ದಿನ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ನಾಲ್ಕು ದಿನದ ನಂತರ ದೇವಸ್ಥಾನದ ಬಾಗಿಲು ತೆರೆದು ನೋಡಿದ ಅರ್ಚಕರಿಗೆ ಅಚ್ಚರಿ ಖಾದಿತ್ತು. ಕದ್ದಿದ್ದ ತಾಳಿಯನ್ನ 100 ರೂ ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದ ಕಳ್ಳರು! ಇದು ದೇವಿಯ ಮಹಿಮೆಯೇ ಸರಿ ಎಂದು ಗ್ರಾಮಸ್ಥರು ಈ ಪವಾಡ ಸದೃಶ ದೃಶ್ಯ, ಘಟನೆಯನ್ನು ನಂಬಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


