ಕಾಸರಗೋಡು: ಇಲ್ಲಿನ ನೆಟ್ಟಣಿಗೆಯಲ್ಲಿ ಅರ್ಜಿದಾರರೊಬ್ಬರಿಗೆ ಜಮೀನು ದಾಖಲೆ ನೀಡಲು ಲಂಚ ಮತ್ತು ಮದ್ಯದ ಬಾಟಲಿಯನ್ನು ಸ್ವೀಕರಿಸಿದ ಗ್ರಾಮ ಅಧಿಕಾರಿ ಮತ್ತು ಸಿಬ್ಬಂದಿ, ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ನೆಟ್ಟಣಿಗೆ ಗ್ರಾಮ ಪಂಚಾಯಿತಿ ಗ್ರಾಮಾಧಿಕಾರಿ ಎಸ್.ಎಲ್.ಸೋನಿ ಹಾಗೂ ಸಿಬ್ಬಂದಿ ಶಿವಪ್ರಸಾದ್ ಬಂಧಿತರು.
ಕಾಸರಗೋಡು ಡಿವೈಎಸ್ಪಿ ಕೆ.ವಿ.ವೇಣುಗೋಪಾಲ್ ಅವರ ತಂಡ ವಿಜಿಲೆನ್ಸ್ ತಂಡ ಆರೋಪಿಯನ್ನು ಬಂಧಿಸಿದೆ.
ಆದೂರಿನ ನಿವಾಸಿಯೊಬ್ಬರು ಮನೆ ನಿರ್ಮಾಣಕ್ಕೆ ಜಮೀನು ದಾಖಲೆ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ಗ್ರಾಮಾಧಿಕಾರಿಯನ್ನು ಸಂಪರ್ಕಿಸಿದಾಗ, ಅವರು 25 ದಿನಗಳ ನಂತರ ಬರುವಂತೆ ಹೇಳಿದರು. ತನಗೆ ಆದಷ್ಟು ಬೇಗ ದಾಖಲೆ ಬೇಕು ಎಂದು ದೂರುದಾರರು ಹೇಳಿದಾಗ ಅವರು 2,000 ರೂಪಾಯಿ ಲಂಚ ಮತ್ತು ಮದ್ಯದ ಬಾಟಲಿಗೆ ಒತ್ತಾಯಿಸಿದರು. ಈ ಸಂಬಂಧ ಅರ್ಜಿದಾರರು ಜಾಗೃತ ಇಲಾಖೆಗೆ ದೂರು ಸಲ್ಲಿಸಿದ್ದರು.
ಲಂಚ ಹಾಗೂ ಮದ್ಯದ ಬಾಟಲಿ ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್ ಅಧಿಕಾರಿಗಳು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.