ಸುರತ್ಕಲ್: ಇಲ್ಲಿನ ಕಾನ- ತೋಕೂರು ಎಂಎಸ್ಇಝಡ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ್ಯ ಮಾಡುತ್ತಿರುವ ಎಂಆರ್ಪಿಎಲ್ ಮತ್ತು ಎಂಎಸ್ಇಝಡ್ ಸಂಸ್ಥೆಗಳು ಬೇಜವಾಬ್ದಾರಿ ವಹಿಸುತ್ತಿವೆ ಎಂದು ಆರೋಪಿಸಿ ಕಾನ- ತೋಕೂರು ಆಟೊರಿಕ್ಷಾ ಚಾಲಕರ ಸಂಘ (ಸಿಐಟಿಯು) ಮತ್ತು ಡಿವೈಎಫ್ಐ ಸುರತ್ಕಲ್ ಘಟಕದ ನೇತೃತ್ವದಲ್ಲಿ ಗುರುವಾರದಂದು ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಯಿತು.
ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ಮಿಯಾಝ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ‘ಮಂಗಳೂರಿನ ಗ್ರಾಮ ಮತ್ತು ಮಂಗಳೂರು ನಗರ ಅಭಿವೃದ್ಧಿ ನಿಟ್ಟಿನಲ್ಲಿ ತೈಲಾಗಾರ, ವಿಶೇಷ ಅರ್ಥಿಕ ವಲಯ, ಬಂದರಿಗೆ ನೆಲ, ಜಲ ಮತ್ತು ಭಾವನಾತ್ಮಕ ಸಂಬಂಧ ತ್ಯಾಗ ಮಾಡಿದ ಜನರಿಗೆ ಕನಿಷ್ಠ ರಸ್ತೆ ನಿರ್ಮಾಣ ಮಾಡಲು ಎಂಆರ್ಪಿಎಲ್ ಮತ್ತು ಎಸ್ಇಝಡ್ಗೆ ಆಗಿಲ್ಲ. ಈ ಸಂಸ್ಥೆಗಳು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಾನ- ತೋಕೂರು ರಸ್ತೆಯು ಹೊಂಡಮಯವಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿದೆ. ಹದಿನೈದು ದಿನಗಳಲ್ಲಿ ರಸ್ತೆ ಸಮಸ್ಯೆ ಪರಿಹಾರ ಆಗದಿದ್ದರೆ ಕೈಗಾರಿಕೆಗಳಿಗೆ ಬರುವ ಎಲ್ಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಪಿಎಂ ಸುರತ್ಕಲ್ ಶಾಖಾ ಕಾರ್ಯದರ್ಶಿ ಶ್ರೀನಾಥ್ ಕುಲಾಲ್, ಅಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಬಷೀರ್, ಡಿವೈಎಫ್ಐ ಸುರತ್ಕಲ್ ಘಟಕ ಅಧ್ಯಕ್ಷ ಬಿಕೆ ಮನ್ಸೂದ್, ಜಿಲ್ಲಾ ಸಮಿತಿ ಸದಸ್ಯ ಶೈಫರ್ ಅಲಿ ಚೊಕ್ಕಬೆಟ್ಟು, ಸಾದಿಕ್ ಕಿಲ್ಪಾಡಿ, ಇಮ್ಮಿಯಾಝ್ ಕುಳಾಯಿ, ಮುನೀಬ್, ಶಮೀರ್, ರಿಕ್ಷಾಚಾಲಕರ ಸಂಘದ ಪ್ರಮುಖರಾದ ಗಣೇಶ್, ಲಕ್ಷ್ಮೀಶ್ ಅಂಚನ್, ಸುಧೀರ್ ಕೋಡಿಕೆರೆ, ಮೆಲ್ವಿನ್ ಪಿಂಟೊ, ಹಂಝ ಮೈಂದಗುರಿ, ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಬಾವ ಜೋಕಟ್ಟೆ, ನಾಗರಿಕ ಸಮಿತಿಯ ಇಟ್ಬಾಲ್ ಜೋಕಟ್ಟೆ, ಮೆಹಬೂಬ್ ಖಾನ್, ಜಗದೀಶ್ ಕಾನ, ಫ್ರಾನ್ಸಿಸ್ ಕಾನ, ಲಾರಿ ಚಾಲಕರ ಸಂಘದ ಆರಿಫ್, ಅಸ್ಕರ್ ಆಲಿ ಜನತಾಕಾಲೊನಿ ಇದ್ದರು.