ಮಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ತ್ರಿವಳಿ ತಲಾಖ್ ನೀಡಿದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರು ನಗರ ವಲಯದ ದೇರಳಕಟ್ಟೆ ಅಸೈಗೋಳಿಯಲ್ಲಿ ನಡೆದಿದೆ. ಅಬ್ದುಲ್ ಕರೀಂ ಬಂಧಿತ ಆರೋಪಿ.
ಆರೋಪಿ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದು ಮಾತ್ರವಲ್ಲದೇ ನಿರಂತರ ಹಲ್ಲೆ ಮಾಡಿ ನಂತರ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ಪತ್ನಿ ನಗರದ ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಮಹಿಳಾ ಪೊಲೀಸ್ ಠಾಣೆಯ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರಿ ಪಡಿಸಿದ್ದು ನಗರದ ಮೂರನೆ ಜೆ. ಎಂ. ಎಫ್. ಸೀ ನ್ಯಾಯಾಲಯವು ದಿನಾಂಕ 08/11/2023 ರಂದು ಆರೋಪಿ ಕರೀಮ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ದ ನಗರದ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯ ಕ್ರೈಂ ನಂಬರ್ 110/23 ಯಾಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ 3 ಮತ್ತು 4, I.P.C ಕಾಯ್ದೆ 323,498A,504,506, ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆ 4 ಮುಂತಾದ ಪ್ರಕರಣಗಳು ದಾಖಲಿಸಲಾಗಿದೆ.