ಬೆಳ್ತಂಗಡಿ: ತುಂಬು ಗರ್ಭಿಣಿಯೊಬ್ಬರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ತೀವ್ರತರವಾದ ನೋವು ಕಾಣಿಸಿಕೊಂಡ ಪರಿಣಾಮ 108 ಅಂಬುಲೆನ್ಸ್ ನ ಶುಶ್ರೂಶಕಿ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ಇಂದು ನಡೆದಿದೆ.
ಘಟನೆಯ ವಿವರ:
ಹೆರಿಗೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶಿರ್ಲಾಲು ಗ್ರಾಮದ ಮಜಲಡ್ಡ ನಿವಾಸಿ ಲಲಿತ (38) ಎಂಬ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಕ್ಕಡದ 108 ಅಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪಿಸುತ್ತಿದ್ದಂತೆ ಮಹಿಳೆಗೆ ವಿಪರೀತ ನೋವು ಉಲ್ಬಣಗೊಂಡು ತಕ್ಷಣ ಆಂಬುಲೆನ್ಸ್ ನಿಲ್ಲಿಸಿ ಕಾರ್ಯ ಪ್ರವರ್ತರಾದ ಶುಶ್ರೂಶಕಿ ವಿಲ್ಮಾ ಹಾಗೂ ವಾಹನ ಚಾಲಕ ಗಿರೀಶ್ ರವರ ಸಹಾಯದಿಂದ ಅಂಬುಲೆನ್ಸ್ ನ ಒಳಗೆಯೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ತಾಯಿ ಮಗು ಅರೋಗ್ಯವಾಗಿದ್ದು ಇಬ್ಬರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಶ್ರೂಶಕಿ ವಿಲ್ಮಾ ಮತ್ತು ಚಾಲಕ ಗಿರೀಶ್ ರವರ ಸಮಯಪ್ರಜ್ಞೆಯಿಂದ ತಾಯಿ ಮತ್ತು ಗಂಡು ಮಗುವಿನ ಪ್ರಾಣಕ್ಕೆ ಯಾವುದೇ ರೀತಿಯ ತೊಂದರೆ ಆಗದಿದ್ದಕ್ಕೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದಾರೆ.