ಉಡುಪಿ: ಇಲ್ಲಿನ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಕಚೇರಿಯ ಬಳಿ ಸೋಮವಾರ ದಂದು ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ‘ಕಾಂಗ್ರೆಸ್ ಸರಕಾರವು 2023ರ ಚುನಾವಣೆಯಲ್ಲಿ ಬಿಟ್ಟಿ ಆಮಿಷ ನೀಡಿ ಆಡಳಿತಕ್ಕೆ ಬಂದಿದೆ. ಆದರೆ ಈಗ ಸರಕಾರ ಬಂದ ಬಳಿಕ ನೀಡಿದ ಭರವಸೆಗಳನ್ನು ನೀಡದೆ ಜನರನ್ನು ವಂಚಿಸಲಾಗಿದೆ. ಇದು ಪಕ್ಷದ ಪ್ರತಿಭಟನೆಯಲ್ಲಿ ಸಾಮಾನ್ಯ ಜನರ ಸಮಸ್ಯೆ. ಜನರ ಪರ ಪ್ರತಿಭಟನೆಗೂ ಸರಕಾರ ಅನುಮತಿ ನೀಡಿಲ್ಲ. ಸಾಮಾನ್ಯ ಜನರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದಂತಾಗಿದೆ. ಹಾಲಿನ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ. ಪ್ರತೀ ಬಾರಿಯೂ ಕೇಂದ್ರ ಸರಕಾರವನ್ನು ಟೀಕಿಸುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಮುಂದಿನ ದಿನದಲ್ಲಿ ಜನರು ಭಿಕ್ಷೆ ಬೇಡುವ ಸ್ಥಿತಿಯೂ ದೂರವಿಲ್ಲ. ಇಂಧನ ದರ ಇಳಿಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು,’ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ‘ಜನಪ್ರತಿನಿಧಿಗಳಿಗೆ ಸರಕಾರದ ಯಾವುದೇ ಫಂಡ್ ಬಾರದೆ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದೆ. ಜನರಿಗೆ ಅನ್ಯಾಯ ಮಾಡುತ್ತಾ ಸರಕಾರ ಕಾಲಹರಣ ಮಾಡುತ್ತಿದೆ. ಇಂಧನ ಹೆಚ್ಚಳವಾದರೆ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಸರಕಾರ ನಡೆಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿದೆ. ಮುಂದಿನ ದಿನಗಳಲ್ಲಿಯೂ ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.