ಬೆಂಗಳೂರು: ಬಣ್ಣಬಣ್ಣದ ಡಿಸೈನ್ ಕಾರೊಂದರ ಒಳಗೆ ಕೊಳೆತ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮನೆಯೊಂದರ ಬಳಿ ನಿಲ್ಲಿಸಲಾಗಿದ್ದ ಬಣ್ಣ ಬಣ್ಣದ ಅಂಬಾಸಡರ್ ಕಾರಿಗೆ ಹಳದಿ ಬಣ್ಣ ಬಳಿಯಲಾಗಿದ್ದು, ಅದರ ಮೇಲೆ ವರ್ಣರಂಜಿತ ಹೂವುಗಳನ್ನು ಚಿತ್ರಿಸಲಾಗಿದೆ. ಈ ಕಾರನ್ನು ಕೆಲವು ಶೂಟಿಂಗ್ಗಳಿಗೆ ಬಳಸಲಾಗಿತ್ತು. ಆದರೆ ಕಳೆದ 2 ವರ್ಷಗಳಿಂದ ಇದನ್ನು ಇಲ್ಲೇ ಪಾರ್ಕ್ ಮಾಡಲಾಗಿತ್ತು.
ಕಾರಿನ ಮಾಲೀಕ ಎರಡು ವರ್ಷಗಳ ಹಿಂದೆ ಬೇರೆ ಕಡೆಗೆ ಶಿಫ್ಟ್ ಆಗಿದ್ದು, ಹೋಗುವಾಗ ಕಾರನ್ನು ಮನೆ ಹಿಂದೆ ನಿಲ್ಲಿಸಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಇಂದು ಸುತ್ತಮುತ್ತಲ ಪರಿಸರದಲ್ಲಿ ವಾಸನೆ ಬರಲಾರಂಭಿಸಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ಈ ಕಾರೊಳಗೆ ಕೊಳೆತ ಶವ ಪತ್ತೆಯಾಗಿದೆ. ಸದ್ಯಕ್ಕೆ ಮೃತ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಮಾಗಡಿ ರಸ್ತೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯ ಬಳಿ ದಾಸರಹಳ್ಳಿ ನಿವಾಸಿ ಬಸಪ್ಪ ಎಂಬುವರ ಆಧಾರ್ ಕಾರ್ಡ್ ಹಾಗೂ ಮದ್ಯದ ಬಾಟಲ್ ಸಿಕ್ಕಿದೆ. ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ ಆಧರಿಸಿ ಮೃತವ್ಯಕ್ತಿಯ ಗುರುತುಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.