ನವದೆಹಲಿ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ (ಎಸ್ ಸಿ) ಮೀಸಲು ಕ್ಷೇತ್ರಗಳಿಂದ ಸಂಸತ್ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಮತ್ತು ಇತರ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಸದಸ್ಯ ಜಿವಿಎಲ್ ನರಸಿಂಹರಾವ್ ರಾಜ್ಯಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಕ್ರಿಶ್ಚಿಯನ್ಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಿಲ್ಲ ಎಂದು ಅವರು ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಜಿವಿಎಲ್ ನರಸಿಂಹರಾವ್ ಅವರು ಈ ಹಿಂದೆ ದಲಿತ ಸಮುದಾಯಕ್ಕೆ ಸೇರಿದವರು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದವರು ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತೀರಾ ಎಂಬ ಕೇಂದ್ರದ ನಿಲುವಿನ ಬಗ್ಗೆ ಕೇಂದ್ರ ಕಾನೂನು ಸಚಿವರಿಂದ ಉತ್ತರ ಕೇಳಿದ್ದರು.
ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಅರ್ಹತೆ ಕುರಿತು ಮಾತನಾಡಿದ ಸಚಿವ ರವಿಶಂಕರ್ ಪ್ರಸಾದ್, ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರವಾದವರಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ. ‘ಸಂವಿಧಾನದ 3ನೇ ಪ್ಯಾರಾ (ಪರಿಶಿಷ್ಟ ಜಾತಿ)ದ ಪ್ರಕಾರ ಹಿಂದೂ, ಸಿಖ್, ಬೌದ್ಧ ಧರ್ಮದ ಹೊರತಾಗಿ ಬೇರೆಯವರಿಗೆ ಮೀಸಲಾಗಿರಿಸಿದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮತಾಂತರಗೊಂಡವರಿಗೆ ಹಕ್ಕು ಇರುವುದಿಲ್ಲ. ಹಾಗೆಯೆ ಈ ವಿಚಾರದಲ್ಲಿ ಯಾವುದೇ ತಿದ್ದುಪಡಿ ತರುವ ಯೋಚನೆಗಳೂ ಸರಕಾರದ ಮುಂದಿಲ್ಲ ಎಂದು ರವಿಶಂಕರ್ ಸ್ಪಷ್ಟವಾಗಿ ಹೇಳಿದರು.