ಉಡುಪಿ: ಪ್ರೀತಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದು ಬಳಿಕ ಅದೇ ಚೂರಿಯಿಂದ ತನ್ನ ಕತ್ತು ಕೊಯ್ದುಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಯುವಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಚೂರಿ ಇರಿತಕ್ಕೊಳಗಾಗಿದ್ದ ಸೌಮ್ಯಾಶ್ರೀ ಭಂಡಾರಿ ಎಂಬ ಯುವತಿ ನಿನ್ನೆ ಸಾವನ್ನಪ್ಪಿದ್ದಳು. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೇಶ್ ಕಲಾಲ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಉಡುಪಿಯ ಅಂಬಾಗಿಲು ನಿವಾಸಿ ಸೌಮ್ಯಶ್ರೀ ಮತ್ತು ಅಲೆವೂರು ನಿವಾಸಿಯಾಗಿರುವ ಸಂದೇಶ್ ಕುಲಾಲ್ ಪ್ರೀತಿಸುತ್ತಿದ್ದರು. ಆದರೆ ವಾರದ ಹಿಂದೆ ಯುವತಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು.
ಸೌಮ್ಯಶ್ರೀಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಆಗಿದ್ದರಿಂದ ಸಿಟ್ಟಿಗೆದ್ದ ಪ್ರಿಯಕರ ಸಂದೇಶ್ ಕಲಾಲ್ ಆಕೆ ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ಸ್ಕೂಟಿ ತಡೆದು ಚಾಕು ಇರಿದಿದ್ದ. ಆತನೂ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದ. ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಗಂಭೀರಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಹೊತ್ತಿಗೆ ಯುವತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ, ಯುವಕ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.
ಸಂತೆಕಟ್ಟೆ ಎಂಬಲ್ಲಿ ನಿನ್ನೆ ಸಂಜೆಯ ವೇಳೆ ಈ ಘಟನೆ ನಡೆದಿದ್ದು, ನಗರವನ್ನು ತಲ್ಲಣಗೊಳಿಸಿತ್ತು. ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಆಗಿದ್ದಕ್ಕೆ ಕೋಪಗೊಂಡ ಯುವಕ ಸಂದೇಶ್ ದುಷ್ಕೃತ್ಯ ಎಸಗಿದ್ದನು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಸದ್ಯ ಮಣಿಪಾಲದ ಕೆಎಂಸಿಯ ಶವಾಗಾರದಲ್ಲಿ ಯುವಕ ಹಾಗೂ ಯುವತಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.


