ಮೈಸೂರು: ಯುಗಾದಿ ಹಬ್ಬಕ್ಕೆಂದು ಬಂದಿದ್ದ ತಮ್ಮ ಹಾಗೂ ಆತನ ಪತ್ನಿ, ಅಣ್ಣನ ಮಗನ ಮದುವೆಗೆಂದು ಇರಿಸಿದ್ದ 3.30 ಲಕ್ಷ ರೂ. ಕಳ್ಳತನ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ನಿವಾಸಿ ವೆಂಕಟರಾಜು ಮನೆಗೆ ಬಂದಿದ್ದ ತಮ್ಮ ಸ್ವಾಮಿ ಹಾಗೂ ಆತನ ಪತ್ನಿ ಸುನಂದಾ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಸ್ವಾಮಿ ದಂಪತಿ ಏಪ್ರಿಲ್ 14ರಂದು ಅಣ್ಣನ ಮನೆಗೆ ಬಂದಿದ್ದು, ಒಂದು ವಾರ ತಂಗುವುದಾಗಿ ಹೇಳಿದ್ದರು. ಆದರೆ ಬಂದ ಮಾರನೇ ದಿನವೇ ದಂಪತಿ ತವರಿಗೆ ಮರಳಿದ್ದರಿಂದ ಅನುಮಾನ ಉಂಟಾಗಿತ್ತು.
ಮಗನ ಮದುವೆಗೆಂದು ಬೀರುವಿನಲ್ಲಿ ಇಟ್ಟಿದ್ದ ಹಣವನ್ನು ದಂಪತಿ ಕದ್ದಿದ್ದರು. ಈ ಬಗ್ಗೆ ಪ್ರಶ್ನಿಸಿದರೆ ಸಾಕ್ಷಿ ಏನಿದೆ ಎಂದು ಉಡಾಫೆಯಿಂದ ಉತ್ತರಿಸಿದ್ದರು. ಇದರಿಂದ ಬೇಸರಗೊಂಡ ಅಣ್ಣ ಹುಲ್ಲಹಳ್ಳಿ ಠಾಣೆಗೆ ದೂರು ನೀಡಿದ್ದರು.
ಕಳ್ಳ ದಂಪತಿಯನ್ನು ಬಂಧಿಸಿದ ಪೊಲೀಸರು ಕಳುವಾಗಿದ್ದ ಹಣ ವಶಕ್ಕೆ ಪಡೆದಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.