ಚಿಕ್ಕಮಗಳೂರು : ಇಷ್ಟು ದಿನ ಕೊಂಚ ಮಟ್ಟಿಗೆ ನಿರಾಳರಾಗಿದ್ದ ಕಾಫಿನಾಡು ಚಿಕ್ಕಮಗಳೂರಿನ ಜನ ಇದೀಗ ಭಯದಲ್ಲೇ ದಿನದೂಡುವಂತಾಗಿದೆ. ದಿನೇ ದಿನೇ ಕೊರಾನಾ ಸೋಂಕಿತರ ಸಂಖ್ಯೆ ಇಲ್ಲಿ ಹೆಚ್ಚಾಗುತ್ತಿದೆ. ಇದೀಗ ಇಲ್ಲಿ ಸೋಂಕಿತರ ಸಂಖ್ಯೆ 43 ಕ್ಕೆ ಏರಿಕೆಯಾಗಿದ್ದು, ಇದು ಇಂದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸಾಕಷ್ಟು ಮಂದಿ ಈಗಾಗಲೇ ತಮ್ಮ ವರದಿಗಾಗಿ ಕಾಯುತ್ತಿದ್ದಾರೆ.
ಒಂದು ವಾರದ ಹಿಂದೆ ಇಲ್ಲಿ ನಾಲ್ವರು ಪೊಲೀಸರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಕಳೆದ 6 ತಿಂಗಳಿಂದ ಜೈಲಿನಲ್ಲೇ ಇದ್ದ ಕೈದಿಯಲ್ಲೂ ಸೋಂಕು ಕಾಣಿಸಿಕೊಂಡದ್ದು ಅಚ್ಚರಿಗೆ ಕಾರಣವಾಗಿತ್ತು. ಜೈಲಿನಲ್ಲಿ ಇದ್ದಾತನಿಗೆ ಹೇಗೆ ಸೋಂಕು ಕಾಣಿಸಿತು ಅನ್ನೋದು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇನ್ನು ಮೂರು ದಿನಗಳ ಹಿಂದೆ ತಳ್ಳು ಗಾಡಿಯ ತರಕಾರಿ ವ್ಯಾಪಾರಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಆತನಿಂದ ಇನ್ನೊಂದಷ್ಟು ಜನರಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಆತ ಸಂಚರಿಸಿದ ಏರಿಯಾ ಮಂದಿ ಆತಂಕದಲ್ಲಿದ್ದಾರೆ.ಅದಲ್ಲದೇ ಬೆಂಗಳೂರಿಗೆ ಹೋಗಿ ಬಂದ ಯುವಕನೊಬ್ಬನಲ್ಲೂ ಸೋಂಕು ಕಾಣಿಸಿಕೊಂಡಿರೋದು ಭಯದ ವಾತಾವರಣ ನಿರ್ಮಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.