ಮುನಿರಾಬಾದ್ ಈ ಕೊರೊನಾ ಅನ್ನೋ ಹೆಮ್ಮಾರಿ ಯಾವಾಗ ಯಾರಿಗೆ ಹೇಗೆ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಕೆಲವೊಂದು ಕೊರೊನಾ ಪಾಸಿಟೀವ್ ಪ್ರಕರಣದಲ್ಲಿ ಸಂಪರ್ಕ ಪತ್ತೆ ಹಚ್ಚೋದಕ್ಕೂ ಸಾಧ್ಯವಾಗೋದಿಲ್ಲ. ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಸೋಂಕು ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ಕೊರೊನಾ ಆರ್ಭಟ ಇಷ್ಟೊಂದು ಜೋರಾಗಿದ್ರೂ ಪಾರ್ಟಿ ಮಾಡೋಕೆ ಹೋಗಿ ಇದೀಗ ಕೊರೊನಾ ಅಂಟಿಕೊಂಡಿಸಿದ್ದಾನೆ.
ಜಿಂದಾಲ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಮುನಿರಾಬಾದ್ ನಿವಾಸಿಯಾಗಿದ್ದು, ಕಳೆದ 5 ದಿನಗಳ ಹಿಂದೆ ತನ್ನ 10 ಸ್ನೇಹಿತರ ಜೊತೆ ನಿಷೇಧಿತ ಪ್ರದೇಶವಾದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಪಾರ್ಟಿ ಮಾಡಿದ್ದಾನೆ. ಇವರಲ್ಲಿ 8 ಜನ ಸ್ನೇಹಿತರು ಗದಗ ಜಿಲ್ಲೆಯವರಾಗಿದ್ದಾರೆ. ನಿನ್ನೆ ಈತನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆರೋಗ್ಯ ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್ ಅಂತಾ ಗೊತ್ತಾಗಿದೆ. ಇದೀಗ ಜೊತೆಗೆ ಪಾರ್ಟಿ ಮಾಡಿದ್ದ ಸ್ನೇಹಿತರು ಹಣೆ ಹಣೆ ಚಚ್ಚಿಕೊಳ್ಳುವಂತಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಆತ ಪ್ರತಿ ದಿನ ವಾಯುವಿಹಾರ ಮಾಡುತ್ತಿದ್ದ ಪ್ರದೇಶ, ಹಾಗೇ ಪಾರ್ಟಿ ಮಾಡಿದ್ದ ಜಾಗವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಆತನಿಗೆ ಕೊರೊನಾ ಹೇಗೆ ಬಂತು ಎಂಬ ಬಗ್ಗೆ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.